ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಜುಲೈ 16, 2017

ವಿದುರ ನೀತಿ

ವಿದುರ  ನೀತಿ

ಬಂದನಾ ಧೃತರಾಷ್ಟ್ರರಾಯನ
ಮಂದಿರಕೆ ಕಂಡನು ಮಹೀಷನ
ನೊಂದೆರಡು ಮಾತಿನಲಿ ಸೂಚಿಸಿ ಮರಳಿದನು ಮನೆಗೆ
ಅಂದಿನಿರುಳೊಳು ನಿದ್ರೆ ಬಾರದೆ
ನೊಂದು ವಿದುರನ ಕರೆದು ರಾಯನ
ತಂದೆ ಬಿಸುಸುಯ್ಯುತ್ತ ನುಡಿದನು ವಿದುರದೇವಂಗೆ ||೧||

ನಾಳೆ ಸಭೆಯಲಿ ಬಂದ ಹದನನು
ಹೇಳುವನು ಸಂಜಯನು ಸಂಧಿಯೊ
ಕಾಳಗವೊ ಮುಂದರೀಯಬಾರದು ದುಗುಡವಾಯ್ತೆನಗೆ
ಹೇಳು ನಿರುತವನಿಂದಿರುಳನು
ಬೀಳುಕೊಟ್ಟುದು ನಿದ್ರೆಯೆನೆಭೂ
ಪಾಲಕನ ಸಂತೈಸಿ ಮತ್ತಿಂತೆಂದನಾ ವಿದುರ ||೨||

ಬಲವಿಹೀನನು ಬಲ್ಲಿದನ ಕೂ
ಡೊಲಿದು ತೊಡಕಿದವಂಗೆ ಕಾಮದ
ಕಳವಳದಲಿರ್ದವಂಗೆ ಧನದಳಲಿಂದ ಮರಗುವಗೆ
ಕಳವಿನಲಿ ಕುದಿವಂಗೆ ದೈವದ
ನೆಲೆಯನರಿಯದವಂಗೆ ದಿಟವಿದು
ತಿಳಿಯೆ ಬಾರದು ನಿದ್ರೆಯೆಂದನುಭೂಪತಿಗೆ ವಿದುರ||೩||

ಒಂದರಿಂದೆರಡಹುದನರಿ ಮೂ
ರಂದವನು ತಿಳಿ ನಾಲ್ಕರಲಿ ಮನ
ಗುಂದದಿರದೈದರಲಿ ವರ್ಜಿಪುದಾರನೇಳರಲಿ
ಒಂದಿಸದಿರೆಂಟನು ವಿಚಾರಿಸಿ
ಮುಂದುವರಿವೊಂಬತ್ತರಲಿ ಮನ
ಗುಂದಿಸದಿರೀರೈದರಲಿ ಭೂಪಾಲ ಕೇಳೆಂದ ||೪||

ತನ್ನ ಚಿಂತೆಯದೊಂದು ದೈವದ
ಗನ್ನಗತಕವದೆರಡು ಭಾವದ
ಬನ್ನಣೆಯ ಬಗೆ ಮೂರು ದೈವದ ಭಿನ್ನಮುಖ ನಾಲ್ಕು
ತನ್ನ ನೆನಹಿನವೋಲುಕಾರ್ಯವು
ಚೆನ್ನಹಡೆ ಲೋಕಕ್ಕೆ ತಾ ಬೇ
ರಿನ್ನು ದೈವವದೇಕೆ ತಾನೇ ದೈವರೂಪೆಂದ ||೫||

ಒಂದು ವರ್ಣವನರುಹಿದವ ಗುರು
ವೊಂದಪಾಯದಲುಳುಹಿದವ ಗುರು
ಬಂದ ವಿಗ್ರಹದೊಳಗೆ ರಕ್ಷಿಸಿದಾತ ಪರಮಗುರು
ಒಂದೆರಡು ಮೂರೈಸಲೇ ತಾ
ನೆಂದು ಗರ್ವೀಕರಿಸಿದವರುಗ
ಳೊಂದುವರು ಚಾಂಡಾಲ ಯೋನಿಯೊಳರಸ ಕೇಳೆಂದ ||೬||

ತನ್ನ ಕಾರಿಯವ ಕಾರಣವನುಳಿ
ದನ್ಯಥಾ ಚಿಂತೆಯನು ಮಾಡುವು
ದುನ್ನತಿಕೆ ತಾನಲ್ಲ ನೀತಿಜ್ಞರಿಗೆಭಾವಿಸಲು
ಮನ್ನಿಸುವುದಾತ್ಮನನು ಮಿಕ್ಕುದ
ನನ್ಯರಿಗೆಮಾಡುವುದಲ್ಲದೆ
ತನ್ನ ತಾ ಮರೆದಿಹುದು ಮತವಲ್ಲವೆಂದನಾ ವಿದುರ ||೭||

ಹಾವು ಹಲವನು ಹಡೆದು ಲೋಕಕೆ
ಸಾವ ತಹವೊಲು ನೂರು ಮಕ್ಕಳ
ನಾವ ಪರಿಯಲಿ ಹಡೆದು ಕೆಡಿಸಿದೆ ಭೂಮಿ ಭಾರಕರ
ಭಾವಿಸಲು ಸರ್ವಜ್ಞ ಸರ್ವ ಗು
ಣಾವಲಂಬನನೋಬ್ಬನರ್ಜುನ
ದೇವ ಸಾಲದೆ ನಾಡ ನಾಯಿಗಳೇನು ಫಲವೆಂದ || ೮ ||

ದೀಪ ದೀಪವ ತೊಳಲಿ ಕರ್ಮ ಕ
ಳಾಪದಲಿ ಕುದಿಕುದಿದು ನಾನಾ
ರೂಪಿಂದಾರ್ಜಿಸುವ ಧರ್ಮದ ಗೊಡವೆ ತಾನೇಕೆ
ಭೂಪ ಕೇಳೈ ಸತ್ಯವೊಂದೇ
ಸೋಪನವು ಸಗ್ಗಕ್ಕೆ ಜನ್ಮದ
ಕೂಪರಕ್ಕಿದು ನಾವೆಯಾಗಿಹುದೆಂದನಾ ವಿದುರ||೯||

ಪಾಪದಿಂದಾರ್ಜಿಸಿದೊಡರ್ಥವ
ನಾ ಫಲವನುಂಬವರಿಗಿಲ್ಲಾ
ಪಾಪವೊಬ್ಬಂಗಪ್ಪುದಾರ್ಜಿಸಿದುರಗನಂದದಲಿ
ಕಾಪಥವನಾಶ್ರಯಿಸಿ ಕೋಪಾ
ಟೋಪದಿಂದುತ್ತಮರ ಸರ್ವ
ಸ್ವಾಪಹಾರವ ಮಾಡಿ ಬದುಕುವುದಾವಗುಣವೆಂದ||೧೦||

ಬವರ ಮುಖದಲಿ ವೈರಿರಾಯರ
ನವಗಡಿಸಿ ತಂದಾ ಧನವ ಭೂ
ದಿವಿಜ ಸಂತತಿಗಿತ್ತು ಫಲವಿನಿತೆಂದು ಗಣಿಸುವಡೆ
ದಿವಿಜಪತಿಗಾಗದು ಕಣಾ ಮಾ
ನವಪತಿಗೆ ಸದ್ಧರ್ಮವಿದು ನಿ
ನ್ನವನು ನೀತಿಯನರಿಯನೈಧೃಥರಾಸ್ಟ್ರ ಕೇಳೆಂದ||೧೧||

ಧರಣಿಯಮರರ ಧನದಿ ಸಲಹಿದ
ಕರಿತುರಗ ಮೊದಲಾದ ದಳವು
ಬ್ಬರದಿ ಹೆಚ್ಚಿಹುದರಿನೃಪಾಲರ ಯುದ್ಧ ಪರಿಯಂತ
ಜರಿದು ನಸಿವುದು ವಾಹಿನಿಗೆ ಮಲೆ
ತುರು ಮಳಲ ಕಟ್ಟೆಯವೊಲಿದನರಿ
ದರಸುಗಳು ವರ್ಣೋತ್ತಮರ ದೆಸೆಗಂಜಬೇಕೆಂದ||೧೨||

ಉರಗನೌಡಿದೊಡದರ ವಕ್ತ್ರದೊ
ಳಿರದೆ ಮೇಣಾ ದಷ್ಟದೇಹದೊ
ಳಿರದೆ ರುಧಿರವು ಪೋಪವೊಲು ದುಷ್ಟಾಧಿಕಾರಿಗಳ
ಒರಸೊರಸಿನಿಂ ಜನಪದದ ಧನ
ಹರಿವುದರಸಂಗಲಸಿದಾ ಪ್ರಜೆ
ಗಿರದುಭಯ ಪಿಂಗುವುದನರಿ ಭೂಪಾಲ ಕೇಳೆಂದ||೧೩||

ಉರಗನಗಿದೊಡೆ ಮೇಣು ಶಸ್ತ್ರದ
ಲಿರಿದಡೊಬ್ಬನೆ ಸಾವನದರಿಂ
ದರಸು ನೆಗಳಿದ ಮಂತ್ರ ಭೇದಿಸಲರಿನೃಪಾಲಕರ
ಧರೆ ಸಹಿತ ತತ್ಸಕಲ ಬಲ ಸಂ
ಹರಣವಹುದಿದನರಿದು ಭೂಪೋ
ತ್ತರ ರಹಸ್ಯದ ಮಂತ್ರವುಂಟೇ ರಾಯ ನಿನಗೆಂದ||೧೪||

ಏಸು ಧರ್ಮದಲಾರ್ಜಿಸಿದ ಧನ
ವೈಸು ಸಿರಿ ವರ್ಧಿಸುವುದದರಿಂ
ದೇಶಮಂಗಳ ಪುತ್ರ ಮಿತ್ರ ಕಳತ್ರವರಿವಿಜಯ
ಪೈಸರಿಸುವುದು ಬಂದ ಬಳಿವಿಡಿದು
ದಾಸುರದ ಪಥವಿದನರಿದು ಭೂ
ಮೀಶ ಧರ್ಮವ ಹಿಡಿಯಧರ್ಮವ ಬಿಟ್ಟು ಕಳೆಯೆಂದ||೧೫||

ಹರಿವ ನದಿ ತನ್ನಿಚ್ಛೆಯಲಿ ದಡ
ವೆರಡ ಕೆಡಿಸುವವೋಲು ನಾರಿಯ
ರುರವಣೆಗೆ ಕೈಗೊಟ್ಟು ನಡೆಸಿದಡುಭಯ ವಂಶವನು
ನೆರಹುವಳು ನೀರೊಳಗೆ ಮೇರೆಯ
ಮುರಿಯಲೀಯದೆ ಮಾರ್ಗದಲಿ ಮ
ತ್ಸರಿಸದಾಳುವುದನುನಯವು ಭೂಪಾಲ ಕೇಳೆಂದ||೧೬||

ಧರೆಯೋಳಗೆ ಕಡು ಮೂರ್ಖರಿವರಿ
ಬ್ಬರು ಕಣಾ ದುರಿಯೌಧನನು ದಶ
ಶಿರನು ಗೋಗ್ರಹಣದಲಿ ವನಭಂಗದಲಿ ಮುಂಕೊಂಡು
ಅರಿನೃಪರ ಸತ್ವಾತಿಶಯದು
ಬ್ಬರದ ಬಲುಹನು ಕಂಡು ಕಂಡೆ
ಚ್ಚರದೆ ಮರುಳಹುದುಚಿತವೇ ಭೂಪಾಲ ಕೇಳೆಂದ||೧೭||

ಕರಣಿಕನ ಹಗೆಗೊಂಡವಂಗೈ
ಶ್ವರಿಯ ಹಾನಿ ಚಿಕಿತ್ಸಕನನಾ
ದರಿಸದಾತಂಗಾಗದಾಯುಷ್ಯಭಿವೃದ್ಧಿಗಳು
ಅರಸ ಕೇಳಾಯುಷ್ಯ ಭಾಗ್ಯಗ
ಳೆರಡು ಕೆಡುವುವು ತಪ್ಪದವನೀ
ಸಂತರ ಬದ್ಧದ್ವೇಷ ಲೇಸಲ್ಲೆಂದನಾ ವಿದುರ ||೧೮||

ಧರೆಯೊಳಗೆ ರವಿಮಂಡಲವನೊದೆ
ದುರವಣಿಸಿ ಹಾಯ್ವವರು ತಾವಿ
ಬ್ಬರು  ಕಣಾ ಸನ್ಯಾಸಿಯಾಗಿಯೆ ಯೋಗಮಾರ್ಗದಲಿ
ಹರಣವನು ಬಿಟ್ಟವರುಗಳು ಸಂ
ಗರದೊಳಭಿಮುಖರಾಗಿ ಮರಣಾಂ
ತರವನೆಯ್ದುವರವರು ಅವನೀಪಾಲ ಕೇಳೆಂದ ||೧೯||

ಮಾತೃಪಿತೃಗಳು ಶತೃಭಾವವ
ನಾಂತು ನಿಜಸಂತಾನದಲಿ ಸಂ
ಪ್ರೀತಿಯನ  ನೆಲೆಗೊಳಿಸಿ ಸರ್ವಜ್ಞಾಧಿಕಾರದಲಿ
ಖ್ಯಾತರನು ಮಾಡದಡೆ ಹಂಸ
ವ್ರಾತ ಮಧ್ಯದಲ್ಲಿ ಬಕನವೊಲು ವಿ
ಖ್ಯಾತ ಸಭೆಯೊಳು ಯೋಗ್ಯರಹರೇ ಭೂಪ ಕೇಳೆಂದ ||೨೦||

ಸುರರ ಮೇಳದಲಾಡುವವರಿ
ಬ್ಬರು ಕಣಾ ಪ್ರಭುವಾಗಿಯು ಕ್ಷಮೆ
ವೆರಸಿದವನು ದರಿದ್ರನಾಗಿಯು ದಾನಿಯೆನಿಸುವನು
ಅರಿದೆನಿಸದತಿಬಲನ ಧರ್ಮೋ
ತ್ಕರುಷ ದುರ್ಬಲಯುತನ ಸೈರಣೆ
ಸರಿಸವೆನಿಸದು ರಾಯ ಚಿತ್ತೈಸಂದನಾ ವಿದುರ||೨೧||

ಧರಣಿ ನುಂಗುವಳಿಬ್ಬರನು ಸಂ
ಗರವ ಜಯಿಸದ ನೃಪನ. ದೇಶಾಂ
ತರವ ಚರಿಸದ ಪಂಡಿತನನಿದು ಶಾಸ್ತ್ರಸಿದ್ಧವಲೆ
ಅರಸು ಕುಲದಲಿ ಹುಟ್ಟಿ ಸಾಪ
ತ್ನರುಗಳಿರೆ ದೇಹಾಭಿಲಾಷೆಯ
ಲುರಗನಂತೋಳಗಿಹುದು ಧರ್ಮವೆಯೆಂದನಾ ವಿದುರ||೨೨||

ನರ ಜನುಮವತ್ಯಧಿಕವದರೊಳು
ಗುರು ಹಿರಿಯರಿವರೆಂದು ದಾನ
ಕ್ಕರುಹರಿವರಲ್ಲೆಂದು ನೋಡದೆ ಮೂಢ ಮಾರ್ಗದಲಿ
ಕರೆದಪಾಯತ್ರಂಗಿತ್ತು ಪಾತ್ರನ
ಪರಿಹರಿಸಲೀ ಎಲಡರಿಂ ಸಂ
ಹರಣವೈವುದಾರ್ಜಿಸಿದ ಧನವರಸ ಕೇಳೆಂದ ||೨೩||

ತಂದೆ ತಾಯಿಗಳಿಬ್ಬರಾತ್ಮಜ
ವೃಂದವನು ಮಿಗೆ ಸಲಹಿ ತತ್ಸುತ
ರಿಂದ ಲೇಸನು ಪಡೆವವೊಲು ತಜ್ಜನಪದದ ಧನವ
ಕುಂದಿಸದೆ ನೃಪ ಮಂತ್ರಿಗಳು ಸಾ
ನಂದದಲಿ ರಕ್ಷಿಸಲು ಬಳಿಕವ
ರಿಂದ ಸಕಲೈಶ್ವರ್ಯ ಪದವಹುದರಸ ಕೇಳೆಂದ||೨೪||

ಕಾಮಿನಿಯರುಗಳಾರು ಕೆಲಬರು
ಕಾಮಿತವ ಕಾಮಿಸುವರಲ್ಲದೆ
ತಾಮಸದಿನಾ ಮೂರುಕರು ಪೂಜಿಸಿದ ಪೂಜೆಗಳ
ಪ್ರೇಮದಿಂದೊಡಬಢುವರಲ್ಲದೆ
ಸೀಮೆವಿಡಿದಾಗದೆಂಬುದ
ನಾ ಮದಾಂಧರು ಬಲ್ಲರೇ ಧೃತರಾಷ್ಟ್ರ ಕೇಳೆಂದ ||೨೫||

ತನ್ನ ಸುಖ ದುಃಖಂಗಳಿಗೆ ನಿ
ರ್ಭಿನ್ನರಹ ಬಾಂಧವರ ವರ್ಜಿಸಿ
ಗನ್ನಗತಕದಲುಂಡು ಜಾರುವ ಗಾವಿಲರ ಕೂಡಿ
ಅನ್ಯರನು ಪತಿಕರಿಸಿ ಬಹುಮಾ
ನೋನ್ನತಿಕೆಯನು ವಿರಚಿಸುವುದಿದು
ತನ್ನ ತಾನೇ ಕೊಂದುಕೊಂಬುದು ಭೂಪ ಕೇಳೆಂದ ||೨೬||

ಪಿತನಿರಲು ದಾತಾರನಿರಲು ನಿಜ
ಪತಿಯಿರಲು ಸುತ ದಾಸ ಸತಿಯೀ
ತ್ರಿತಯರುಂ ಸ್ವಾತಂತ್ರ್ಯದವರಲ್ಲಾ ಕಾಲದಲಿ
ಕ್ಷಿತಿಯೊಳುತ್ತಮ ಮಧ್ಯಮಾಧಮ
ಗತಿಯ ಪುರುಷತ್ರಯವನವರಿಂ
ಗಿತವನವರಾಯತವನರಿವೈ ಭೂಪ ಕೇಳೆಂದ ||೨೭||

ಬೆಳಸು ಘನ ತೃಣವಧಿಕ ಜಲ ನಿ
ರ್ಮಳವೆನಿಪ ಕಾಲದಲಿ ಪರಮಂ
ಡಲಕೆ ನಡೆವುದು ಘೃಷ್ಟಪುಷ್ಟವಿಹಾರನೆಂದೆನಿಸಿ
ಬಲುಹಹುದು ನಿಜಬಲಕೆ ಬಲವಾ
ನೆಲನ ಮೆಟ್ಟಲು ವೈರಿ ಸೇನಾ
ವಳಿಗೆ ಹೀನತೆ ದೊರಕುವುದು ಧೃತರಾಷ್ಟ್ರ ಕೇಳೆಂದ ||೨೮||

ಮಾಲೆಗಾರ ಸಿಳೀಮುಖನ ಪಶು
ಪಾಲಕನವೊಲ್ ಪ್ರಜೆಯ ರಕ್ಷಿಸಿ
ಮೇಲೆ ತೆಗೆವೈ ಧನವನುಳಿದಂಗಗಾರಕಾರಕನ
ವೋಲು ಕಡದುರು ವ್ಯಾಘ್ರನಂತೆ ವಿ
ತಾಳಿಸಲು ಪ್ರಜೆ ನಸಿಯಲರಸಿನ
ಬಾಳಿಕೆಗೆ ಸಂದೇಹವರಿಯಾ ರಾಯ ಕೇಳೆಂದ ||೨೯||

ಎಲ್ಲಿಹುದು ಋಣಭಯವು ಮನುಜರೊ
ಳಲ್ಲಿಹುದು ದೇವಾಂಶ ನಿಜವಾ
ಗೆಲ್ಲಿಹುದುಸನ್ಮಾರ್ಗ ಬಳಿಕಲ್ಲಿಹುದು ಬ್ರಾಹ್ಮಣ್ಯ
ಎಲ್ಲಿಹುದು ಪರಸತಿಯರಂಜಿಕೆ
ಯಲ್ಲಿಹುದು ವಿಜಾಞಾನವಿದನರಿ
ದಲ್ಲದಿಹಪರವಿಲ್ಲ ಚಿತ್ತೈಸೆಂದನಾ ವಿದುರ ||೩೦||

ರಕ್ಷಿಸೀದ ಧನದಿಂ ಪುರಂಧ್ರಿಯ
ರಕ್ಷಿಸುವುದು ಪುರಂಧ್ರಿಯಿಂದವೆ
ರಕ್ಷಿಸುವುದಾತ್ಮನನು ಧನವಿಡಿದಾವ ಕಾಲದಲಿ
ಲಕ್ಷ ಭೇದವನರಿದು ನಡೆದು ವಿ
ಲಕ್ಷವನು ಮುರಿದಾತ್ಮ ರಕ್ಷೆಯ
ನೀಕ್ಷಿಸುವುದನುನಯವಲೈ ಭೂಪಾಲ ಕೇಳೆಂದ ||೩೧ ||

ತಿಳಿದು ನಾಲ್ವರೊಳೊರೆದ ಕಾರ್ಯವ
ನುಳಿವುದಿಬ್ಬರನಿಬ್ಬರೊಳು ಮ
ತ್ತುಳಿವುದೊಬ್ಬನನೊಬ್ಬನಿಂ ನಿಶ್ಚಯಿಸಿ ಬಳಿಕವನ
ಕಳೆದು ತಾನೇ ತನ್ನೊಳಗೆ ಬಗೆ
ಗೊಳೆ ವಿಚಾರಿಸಿ ಮಾಳ್ಪ ಕಾರ್ಯಕೆ
ಹಳಿವು ಹೊರುವುದೆ ರಾಯ ಚಿತ್ತೈಸೆಂದನಾ ವಿದುರ ||೩೨||

ಹಿರಿದು ಮಾನೋನ್ನತಿಕೆಯನು ಬಂ
ಧುರದ ಧನವನು ಗಾರುಹಸ್ತ್ಯದ
ಪರಮಧರ್ಮವನಾವಬಯಸುವನವನ ಭವನದಲಿ
ನಿರುತ ವೃದ್ಧ ಜ್ಞಾನಿ ವಂಶೋ
ತ್ತರ ದರಿದ್ರಪ್ರಿಯನಪತ್ಯಾಂ
ತರ ಭಗಿನಿಯೀ ನಾಲ್ವರಿರಬೇಕೆಂದನಾ ವಿದುರ ||೩೪||

ಧರಣಿಪತಿ ಚಿತ್ತವಿಸು ಸ್ವರ್ಗದ
ಲೊರೆದನಿಂದ್ರಂಗಮರಗುರು ದೇ
ವರಲಿ ಸಂಕಲ್ಪವನು ಕೃತವಿದ್ಯರಲಿ ವಿನಯವನು
ಹಿರಿಯರಲಿ ಸಂಭಾವನೆಯ ಸಂ
ಹರಣ ಪದವನು ಪಾಪ ಕಾರ್ಯದೊ
ಳಿರದೆ ಮಾಡುವುದೆಂಬ ನಾಲ್ಕನು ರಾಯ ಕೇಳೆಂದ ||೩೫||

ಆವುದೀ ಲೋಕಕ್ಕೆ ಹಿತವದ
ನೋವಿ ನಡೆವ ಜನಕ್ಕೆ ನಿಂದೆಯ
ದಾವುದದನಾಚರರಿಸದಿಹ ನಾಸ್ತಿಕರ ನಂಬುಗೆಯ
ಠಾವುಗಾಣದ ತತ್ವ ವಿಜ್ಞಾ
ನಾವಲಂಬನನೆನಿಪನಾತನು
ಭೂವಲಯದೊಳಗುತ್ತಮನು ಭೂಪಾಲ ಕೇಳೆಂದ ||೩೬||

ಪಿತನು ಗುರು ಶಿಖಿಯಾತ್ಮ ತಾಯೆಂ
ಬತುಳ ಪಂಚಾಗ್ನಿಯನು ಕ್ರಮದಿಂ
ಪ್ರತಿದಿನಂ ಪರಿಚರಿಯ ಮಾಳ್ಪುದು ಲೇಸ ಬಯಸುವರೆ
ಪಿತೃಗಳು ದೇವರನು ವೋದ್ಧರ
ನತಿಥಿಗಳ ಪೂಜಿಸಿದನಾವವ
ಪಿತನ ಕೀರ್ತಿಯ ಧರ್ಮವನು ಪಡೆವವನೆ ಸುತನೆಂದ ||೩೭||

ಸಿರಿಯನುಳ್ಳವನವನೆ ಕುಲಜನು
ಸಿರಿಯನುಳ್ಳವನೇ ವಿದಗ್ಧನು
ಸಿರಿಯನುಳ್ಳವನೆ ಮಹಾತ್ಮನು ಸಕಲಗುಣಯುತನು
ಸಿರಿಯನುಳ್ಳವನೇ ಸುಶೀಲನು
ಸಿರಿರಹಿತ ಶಿವನಾದೊಡಾಗಲಿ
ಸರಕು ಮಾಡದು ಲೋಕವವನೀಪಾಲ ಕೇಳೆಂದ ||೩೮||

ಸಿರಿ ನೆಲೆಯೆ ಜವ್ವನ ನೆಲೆಯೆ ಮೈ
ಸಿರಿ ನೆಲೆಯೆ ತನು ನೆಲೆಯೆ ಖಂಡೆಯ
ಸಿರಿ ನೆಲೆಯೆ ನಿನಗರಸುತನವುಳ್ಳನ್ನ ನೀತಿಯಲಿ
ಧರೆಯ ರಕ್ಷಿಸು ಬಂಧುಗಳನು
ದ್ಧರಿಸು ಧರ್ಮವ ಸಾಧಿಸಿಂತಿದು
ನರಪತಿಗಳಿಗೆ ನೀತಿ ಚಿತ್ತೈಸೆಂದನಾ ವಿದುರ ||೩೯||

ವರುಷವೈದರೊಳರಸೆನಿಸಿ ದಶ
ವರುಷ ದಾಸತ್ವವನು ಭಾವಿಸಿ
ವರುಷ ಹದಿನಾರರಲಿ ಪುತ್ರನ ಮಿತ್ರನೆಂದೆನಿಸಿ
ಪರಿವಿಡಿಗಳಲಿ ನಡೆಸಿ ಮದ ಮ
ತ್ಸರವ ಮಾಣಿಸಿ ನೆರೆದ ಮಕ್ಕಳ
ನರಮೃಗಶ ಮಾಡುವರೆ ಭೂಮಿಪಾಲ ಕೇಳೆಂದ ||೪೦||

ಧನಮದದಿ ಕುಲಮದದಿ ವಿದ್ಯಾ
ಘನದಿ ಯವ್ವನ ಮದದಿ ದ್ವಿಜ ಗುರು
ವನು ವಿಭಾಡಿಸಿ ನೀನು ತಾನೆಂದೆನುತ ಹೂಂಕರಿಸಿ
ಮುನಿಸಿನಲಿ ಸಾತ್ವಿಕರೊಳೊಬ್ಬರ
ನನುಗೂಡಿಸಿ ಗರ್ಜಿಸಲು ನರಕದಿ
ಮುಣುಗಿದಲ್ಲದೆ ಬೇರೆ ಗತಿಯಿಲ್ಲೆಂದನಾ ವಿದುರ ||೪೧||

ಸಲಹಿದೊಡೆಯನ ದಿವ್ಯಮಂತ್ರವ
ಕಲಿಸಿದಾಚಾರ್ಯನನು ಅನುವರ
ದೊಳಗೆ ತಲೆಗಾಯಿದನ ದುರ್ಭಿಕ್ಷದಲಿ ಸಲಹಿದನ
ಜಲದೊಳಾಳ್ದನೆತ್ತಿದನನುರಿ
ಯೊಳಗೆ ಪರಿಹರಿಸಿದನ ಮರೆದವ
ನಿಳಿವನೈ ಕುಲಕೋಟಿ ಸಹಿತ ಮಹಾಂಧ ನರಕದಲಿ ||೪೨||

ಒಲಿದವಳ ಬಿಸುಟೊಲ್ಲದವಳಿಗೆ
ಹಲುಬುವವನಹಿತರಲಿ ಸಖ್ಯಾ
ವಳಿಯನೆಸಗುವವನರಿಯದದು ತಾ ಬಲ್ಲೆನೆಂಬುವನ
ಒಲಿದು ಕೇಳದೆ ಹೇಳುವವ ಕೈ
ನಿಲುಕಲರಿಯದ ಕಾರ್ಯದಲಿ ಹಂ
ಬಲಿಸಿ ಮರುಗುವನವನೆ ಮೂಢನು ರಾಯ ಕೇಳೆಂದ ||೪೩||

ಹರುಷ ದರ್ಪ ಕ್ರೋಧ ಲಜ್ಜಾ
ತುರತೆ ಮಾನ ವಿಮಾನವಿವರಲಿ
ನಿರುತ ಸಮನೆಂದೆನಿಸಿ ಕೃತ್ಯಾಕೃತ್ಯ ಕೌಶಲವ
ವಿರಚಿಸುವ ಕಾಲದಲಿ ಶೀತೋ
ತ್ಕರದಿ ಭಯವೊಡ್ಡೈಸಲದರಿಂ  
ಪರಿಹರಿಸದಾ ಕಾರ್ಯವೆಸಗುವನವನೆ ಪಂಡಿತನು ||೪೪||

ಕರೆಕರೆದು ಮೃಷ್ಟಾನ್ನವನು ಭೂ
ಸುರರಿಗೀವ ಸದಾಗ್ನಿಹೋತ್ರಾ
ಚರಿತವನು ವೇದಾಂತ ವೇದಿಯನಾ ಪತಿವ್ರತೆಯ
ಉರುತರದ ಮಾಸೋಪವಾಸಿಯ
ನಿರದೆ ಮಾಸ ಸಹಸ್ರ ಜೀವಿಯ
ನರಸ ಕೇಳಭಿವಂದಿಸುವರೈ ಮೂರು ಮೂರ್ತಿಗಳು||೪೫||

ಬಿಸುಟು ಕಳೆವುದು ನೀತಿ ಶಾಸ್ತ್ರವ
ನುಸುರದಾಚಾರಿಯನ ವೇದ
ಪ್ರಸರವಿಲ್ಲದ ಋಷಿಜನವ ರಕ್ಷಿಸದ ಭೂಭುಜನ
ಒಸೆಯದಬಲೆಯನೂರೊಳಾಡುವ
ಪಶುವ ಕಾಯ್ದನನಡವಿಗುರಿಯಹ
ನುಸಿಯನಾ ಪಿತನಿಂತರುವರನು ರಾಯ ಕೇಳೆಂದ||೪೬||

ವ್ಯಸನವೇಳರ ಕಾಲುಕಣ್ಣಿಯ
ಹಸರದೊಳಗಳವಳಿದು ಹೆಚ್ಚಿದ
ವಿಷಮದಿರುಬಿನೊಳದ್ದು ಮಾಯಾಮಯದ ತೋಹಿನಲಿ
ಬಸವಳಿದು ಷಡುವರ್ಗ ವೇಧೆಯ
ನುಸುಳುಗಂಡಿಯನೀಕ್ಷಿಸದೆ ತಾ
ಮಸದಥಳಿರುತಿಹುದುಚಿತವೇ ಹೇಳೆಂದನಾ ವಿದುರ ||೪೭||

ಅತಿಬಲನ ಹಗೆಗೊಳುವನಿಹಪರ
ಗತಿ ವಿಚಾರವ ಮರೆವ ಲೋಕ
ಸ್ಥಿತಿಯನುಲ್ಲಂಘಿಸುವ ಮರ್ಮಜ್ಞರ ವಿರೋಧಿಸುವ
ವಿತತ ಭಾಷಿತನಪ್ಪ ತನ್ನಿಂ
ಗಿತವನವರಾಯತವನರಿಯದ
ಕ್ಷಿತಿಪನವ ಮೂಢಾತ್ಮನೈ ಭೂಪಾಲ ಕೇಳಿಂದ ||೪೮||

ಬಲಹರಿದು ಕೋಪಿಸುವ ಬದುಕಿನ
ಬಳಿಯರಿದು ಕೊಡುವಾತ್ಮಹಿತವನು
ತಿಳಿದು ನಿರ್ಮಲವೆನಿಪ ಮೇಲಣ ತಾಗು ಬಾಗುಗಳ
ಹೊಲಬರಿದು ಸುಖ ದುಃಖದಲಿ ಸಂ
ಚಲಿಸದಿಹ ಗಂಗಾ ಮಡುವಿನಂ
ತೊಳಗುದೋರದೆ ನಡೆವವನು ಪಂಡಿತನು ಕೇಳೆಂದ||೪೯||

ದಾನವಿಲ್ಲದ ವಿತ್ತ ಬುಧ ಸ
ನ್ಮಾನವಿಲ್ಲದ ರಾಜ್ಯ ಬಲು ಸುಯಿ
ಧಾನವಿಲ್ಲದ ಸುದತಿ ಧೀಮಾನಿಲ್ಲದಾಸ್ಥಾನ
ಜ್ಞಾನವಿಲ್ಲದ ತಪವು ವೇದ ವಿ
ಧಾನವಿಲ್ಲದ ವಿಪ್ರ ಶರಸಂ
ಧಾನವಿಲ್ಲದ ಸಮರ ಮೆರೆಯದು ರಾಯ ಕೇಳೆಂದ ||೫೦||

ದಿನವಬಂಜೆಯ ಮಾಡದಹಪರ
ವಿನಯನಹ ವರ ದೈವ ಗುರು ಪೂ
ಜನೆಯ ಭುಧ ಸೇವನೆಯ ಕಾಲೋಚಿತದ ವಿವರಣವ
ಮನನದಿಂದಾ ಶ್ರವಣ ವಿದ್ಯಾ
ಸನದಿನಿವನನುಗೊಳಿಪನಾವನು
ಮನುಜರೊಳಗುತ್ತಮನೆಲೆ ಭೂಪಾಲ ಕೇಳೆಂದ ||೫೧||

ಸಲುವೆನೆಂದಂತಃಪುರಕೆ ಸಂ
ಚಲಿಸುವವನಾಪ್ತರನು ಬಿಸುಟ
ಗ್ಗಳಿಸುವವನಹಿತರಲಿ ಧರ್ಮವನುಳಿದಧರ್ಮವನು
ಬಳಸುವವನೇಕಾಂತದಲ್ಲಿಗೆ
ಸುಳಿವವನು ಹಸಿವಿಲ್ಲದುಂಬುವ
ನಿಳೆಯೋಳಗೆ ಮೃಢಾತ್ಮನೈ ಧೃತರಾಷ್ಟ್ರ ಕೇಳೆಂದ||೫೨||

ಬುಧರೊಳಗೆ ಹಗೆಗೊಳುವ ಬುಧರಂ
ನಿಧನಗೆಯ್ದಿಪ ಬುಧರನೇಳಿಪ
ಬುಧರ ಜರದೊಡೆ ನಲಿವ ಬುಧರಂ ಪೋಗಳ್ದರಂ ಪಕ್ಷಿವ
ಬುಧರನಧಮರಮಾಳ್ವ ಬುಧರಂ
ವಿಧಿಗೊಳಿಪ ಬುಧರ್ಗೀವರಂ ಕವ
ರ್ವಧಮ ಭೂಪರಿಗಂಟದಿಹುದೆ ವಿನಾಶಕರವೇಂದ ||೫೩||

ಕುಸುಮ ಫಲ ತಾಂಬೂಲ ಗಂಧ
ಪ್ರಸರ ಭೋಜನ ಗಮನ ನೆನಹಿಂ
ದೆಸೆವ ಕಾರ್ಯದೊಳನಿಬರೊರಗಿದಡೊಬ್ಬ ನೆಚ್ಚರಿಕೆ
ಎಸೆಯಲನಿತುವನೊಬ್ಬನೇ ಭೋ
ಗಿಸುವಡವನೀಪಾಲರಿಗೆ ತಾ
ಸಸಿನವೆನಿಸದು ರಾಯ ಚಿತ್ತೈಸೆಂದನಾ ವಿದುರ ||೫೪||

ಕಳಿದ ತರಣಿಯ ಕಿರಣದಲಿ ನಿ
ರ್ಮಲಿನ ಜಲದಲಿ ದುಗ್ಧ ಪಾನಂ
ಗಳಲಿ ವರಯುವತಿಯರ ಸಂಭೋಗಾಂತರಂಗದಲಿ
ತಳಿತ ಹೋಮದ ಹೊಗೆಗಳಲಿ ದಿನ
ಬಲದೊಳಾಯುಷ್ಯಾಭಿವೃದ್ಧಿಯ
ಬೆಳವಿಗೆಗಳಹವರಸ ಚಿತ್ತೈಸೆಂದನಾ ವಿದುರ ||೫೫||

ಎಳೆಯ ರವಿ ರಶ್ಮಿಯಲಿ ಪ್ರೇತಾಂ
ಗಳದ ಧೂಮಜ್ವಾಲೆಯಲಿ ಗಾ
ವಿಲ ವಯೋವೃದ್ಧೆಯರ ಸಂಭೋಗಾಂತರಂಗಳಲಿ
ಕೊಳಚೆ ನೀರಿನ ಬಳಕೆಯಲಿ ಕ
ತ್ತಲೆಯ ದಧ್ಯೋದನದಲಾಯುಷ
ವಿಳಿದು ಹೋಗದೆ ದಿನ ದಿನದೊಳವನೀಶ ಕೇಳೆಂದ ||೫೬||

ಮಸುಳಿಸಿದ್ದ ದುಕೂಲ ರದನದೊ
ಳೆಸೆವ ಹಾವಸೆ ಭುಕ್ತದುನ್ನತ
ದೆಸಕ ನಿಷ್ಠುರ ವಾಕ್ಯವುದಯಾಸ್ತಮಯ ಕಾಲದಲಿ
ಎಸೆವ ನಿದ್ರಾಂಗನೆಯೊಳೊಂದಿರೆ
ಬಿಸಜಲೋಚನನಾದೊಡೆಯು ವ
ರ್ಜಿಸುವಳವರನು ಭಾಗ್ಯಸಿರಿ ಭೂಪಾಲ ಕೇಳೆಂದ ||೫೭||

ಒಂದು ಮೊದಲಾರಂತ್ಯವಾದಾ
ಸಂದ ಪೂಗಫಲಕ್ರಮಂಗಳ
ಚಂದವನು ಚಿತ್ತೈಸು ಲಾಭಾಲಾಭ ಸುಖದುಃಖ
ಕುಂದದಿಹುದಾಯುಷ್ಯ ಮರಣವಿ
ದೆಂದು ತತ್ಕಾಲದಲಿ ಭೋಗಿಸು
ವಂದವನು ಚಿತ್ತೈಸುವುದು ತಾಂಬೂಲಧಾರಕನು ||೫೮||

ನಾಗವಲ್ಲಿಯ ಹಿಂದು ಮುಂದನು
ನೀಗಿ ಕಳೆಯದೆ ಚೂರ್ಣಪರ್ಣ
ತ್ಯಾಗವಿಲ್ಲದೆ ದಂತಧಾವನ ಪರ್ಣವನು ಸವಿದು
ಭೋಗಿಸುವೊಡಮರೇಂದ್ರನಾಗಲಿ
ನಾಗಭೂಷಣನಾದೊಡವನನು
ನೀಗಿ ಕಳೆವಳು ಭಾಗ್ಯವಧು ಭೂಪಾಲ ಕೇಳೆಂದ ||೫೯||

ಸ್ಥಾನ ಪಂಚಕದಿಂದ್ರಿಯದ ಸಂ
ಸ್ಥಾನದಲಿ ನಿದ್ರಾಂಗನೆಯ ಸ
ನ್ಮಾನಿಸುವೊಡಾ ಸಾಧನದ ಪಂಚಕದ ಪರಿವಿಡಿಯ
ಸ್ಥಾನವರಿದಾರೋಗಣೆಯ ಸಂ
ಧಾನದಲಿ ಚಿತ್ತೈಸುವುದು ರಾ
ಜಾನುಮತವಿದು ಸಕಲ ಸುಖಕರವೆಂದನಾ ವಿದುರ ||೬೦||

ಜನಜನಿತ ಮಲ ಮೂತ್ರ ಮೂರಾ
ರೆನಿಸುವುದು ರತಿಯೊಂದು ನಿಜ ಭೋ
ಜನವೆರಡು ಸುಯಿಲೊಂದು ವರ ತಾಂಬೂಲ ಹದಿನೈದು
ಇನಿತುವನು ತಪ್ಪದೆ ನಡೆಸಲಾ
ಜನಪನಾರೋಗಣೆಗೆ ಸುಖ ಸಂ
ಜನಿಸುವುದು ದಿನಚರಿಯದಿಂದವನೀಶ ಕೇಳೆಂದ ||೬೧||

ನೆರೆದ ಸಚರಾಚರವಿದೆಲ್ಲವು
ನರರ ನಿಜಭೋಜನಕೆ ಜನಿಸಿದ
ವರಸ ಕೇಳಿದರೊಳಗೆ ಭೋಜ್ಯಾಭೋಜ್ಯವನು ತಿಳಿದು
ಪರಿಹರಿಸ ಬಲ್ಲವರುಗಳು ಘನ
ತರದ ಸುಕೃತವನೈದುವರು ಭೂ
ವರರೊಳಗೆ ಸಂದೇಹವೇ ಭೂಪಾಲ ಕೇಳೆಂದ ||೬೨||

ತುರಗಹೃದಯಧ್ವನಿಯ ಸಿಡಿಲಿನ
ಧರಧುರದ ಗರ್ಜನೆಯ ನಾರಿಯ
ರಿರವ ಪುರುಷನ ಭಾಗ್ಯದೇವತೆಯೊಲಿವ ಕಾಲವನು
ವರುಷದುದಯವ ಬರನ ಬರವನು
ವಿರಚಿಸುವೊಡೆ ವಿಧಾತೃಗಳವ
ಲ್ಲರಸ ಕೇಳ್ ಮಾನವರಿಗಿದು ಗೋಚರಿಸಲರಿದೆಂದ ||೬೩||

ಬಡತನಗಳಡಸಿದೊಡೆ ಬಂಧುಗ
ಳೆಡಹಿ ಕಾಣರು ಭಂಟ ತಾನಾ
ದೊಡೆಯು ಬಂದಾಪತ್ತಿನೊಳಗೆ ಪರಾಙ್ಮುಖನೆಯಾಗಿ
ನುಡಿಸದವನೇಹಗೆ ಶರೀರದೊ
ಳಡಸಿದಾ ರುಜೆ ಬಾಧೆಗಡವಿಯ
ಗಿಡ ಮರಂಗಳು ರಕ್ಷಿಸವೆ ಹೇಳೆಂದನಾ ವಿದುರ ||೬೪||

ಕಾಲದೊಳಗೆ ವಸಂತ ವಿದ್ಯಾ
ಜಾಲದೊಳಗೆ ಕವಿತ್ವ ಗಜ ವೈ
ಹಾಳಿಯಲಿ ದೇವೇಂದ್ರ ಮಿತ್ರಶ್ರೇಣಿಯೊಳು ವಾಣಿ
ಭಾಳನೇತ್ರನು ದೈವದಲಿ ಬಿ
ಲ್ಲಾಳಿನಲಿ ಮನ್ಮಥನು ಧನದಲಿ
ಹೇಳಲೇನಭಿಮಾನವೇ ಧನವೆಂದನಾ ವಿದುರ ||೬೫||

ಮುಂದೆ ಗುರುವನು ಬಂಧು ಜನವನು
ಹಿಂದೆ ಕರ್ಮಾಂತ್ಯದಲಿ ಸೇವಕ
ವೃಂದವನು ಕೊಂಡಾಡುವುದು ಸಾಹಿತ್ಯ ಭಾವವಿದು
ಹಿಂದು ಮುಂದಾವಾಗ ನಿನ್ನಯ
ನಂದನರ ನಾರಿಯರ ಹೊಗಳುವು
ದಂದವೇ ಭೂಪಾಲ ಚಿತ್ತೈಸೆಂದನಾ ವಿದುರ ||೬೬||

ತುರಗದೆಡಬಲ ಗಜದ ಸಮ್ಮುಖ
ತರುಣಿಯರುಗಳ ಸರ್ವತೋಮುಖ
ಹಿರಿದು ದುರ್ಜನನಿದ್ದ ದೇಶವದೆಯ್ದೆ ವ್ಯಾಘ್ರಮುಖ
ಭರದಿನಾ ದೇಶವನು ಬಿಟ್ಟರ
ವರಿಸದನ್ಯಗ್ರಾಮಗಳ ವನಾಂ
ತರವನೈದುವುದಲ್ಲದಲ್ಲಿಹುದುಚಿತವಲ್ಲೆಂದ ||೬೭||

ಎತ್ತಲೆತ್ತಲು ಪೋಪ ಮನುಜಂ
ಗತ್ತಲತ್ತಲೆ ದೈವ ಕೂಡೆ ಬ
ರುತ್ತಿಹುದು ಬೆಂಬಿಡದೆ ನಾನಾ ದೇಶ ದೇಶದಲಿ
ಮಿತ್ರನುರು ಮಧ್ಯಸ್ಥಪುರುಷನ
ಮಿತ್ರನೌದಾಸೀನನೊಬ್ಬನು
ಕೃತ್ರಿಮನು ಸಹಜೀವಿಯಂತಿವರರಸ ಕೇಳೆಂದ ||೬೮||

ಗುರು ವಿರೋಧ ಮಹೀಬುಧರ ಮ
ತ್ಸರವು ದೈವದ್ರೋಹ ಗುಣ ಸಾ
ಗರನ ಬಂಧು ದ್ವೇಷವತ್ಯಾಲೀಢ ದೀನತನ
ಶರಣಜನ ಪಾಂಡಿತ್ಯವೆಂಬಿವ
ನರವರಿಸದಂಗೈಸೆ ಭೂಪನ
ಸಿರಿಗೆ ಮೊಳೆಯದೆಕೇಡು ಚಿತ್ತೈಸೆಂದನಾ ವಿದುರ ||೬೯||

ಬಲ ಪ್ರಧಾನನ ವೈರ ಹಿತವಹ
ಲಲನೆಯರ ಮನದಳಲು ಹಗೆಯಲಿ
ಬಳಸುವಂತಸ್ಥತೆಯನಾಮಿಕರೊಡನೆ ಕೆಳೆಗೋಷ್ಠಿ
ಬಲದೊಡನೆ ನಿರ್ಬಂಧ ಧರ್ಮದ
ನೆಲೆಯನರಿಯದ ದಾನಿಗಳ ಸಿರಿ
ಸುಳಿವ ಗಾಳಿಗೆ ಮಲೆವ ದೀಪವು ಕೇಳು ಧೃತರಾಷ್ಟ್ರ ||೭೦||

ಹುಸಿ ಪರದ್ರೋಹವು ಪರ ಸ್ತ್ರೀ
ವ್ಯಸನಪೇಯವಸೂಯೆ ಮಾನ್ಯ
ದ್ವಿಷತೆ ಪತಿತ ಸಮೇತವಾತ್ಮಸ್ತುತಿಯೆನಿಪ್ಪಿವನು
ಬಿಸುಟು ತದ್ವಿಪರೀತದಲಿ ವ
ರ್ತಿಸುವನವನೇ ರಾಯನಾತಗೆ
ವಸುಧೆಯೊಳಗೆಣೆ ಯಾವನೈ ಭೂಪಾಲ ಕೇಳೆಂದ ||೭೧||

ಇದು ಸಮಾಹಿತವಿದು ಶುಭೋದಯ
ವಿದು ಸಕಲಪುರುಷಾರ್ಥಸಾಧನ
ವಿದು ಸುಜನಸನ್ಮಾನವಿದು ಸಂಸಾರಸೌಖ್ಯಫಲ
ಇದು ಸುಬಲವಿದಬಲವಿದಾಮ್ನಾಯ
ಯದ ಸುನಿಶ್ಚಯ ನೀತಿ ಕಾರ್ಯದ
ಹದನನರಿದಾಚರಿಸಬಲ್ಲವನವನೆ ಪಂಡಿತನು ||೭೨||

ಶತೃ ಕಾಲ ಸುದೇಶ ವರ್ಗ ಸು
ಮಿತ್ತರುದಯೋಪಾಯಕರಣ ಸು
ಪಾತ್ರವೆಂಬಿವು ಮೂರು ತೆರನಾಗಿಪ್ಪವಿದರೊಳಗೆ
ಕ್ಷತ್ರಧರ್ಮ ವಿವೇಕವೆಂಬಿವ
ನ್ತೋತ್ರಗೊಕ್ಷಿಪನೆ ರಾಯನವಗೆ ಧ
ರಿತ್ರಿಯೊಳಗೆಣೆ ಯಾವನೈ ಭೂಪಾಲ ಕೇಳೆಂದ ||೭೩||

ಎಲ್ಲಿ ಸುಲಲಿತ ವಿದ್ಯೆ ಬಹುಗುಣ
ವೆಲ್ಲಿ ಗಣಿಕಾ ನಿಕರ ಮಣಿ ಗಣ
ವೆಲ್ಲಿ ಗಜ ಜಾತ್ಯಶ್ವವೆಲ್ಲಿ ವರೂಥ ಸಂದೋಹ
ಎಲ್ಲಿ ಸುಭಟ ನಿಕಾಯ ನೆರೆದಿಹು
ದಲ್ಲಿ ತನ್ನಾಧೀನ ಮಾಡಲು
ಬಲ್ಲವನೆ ನೃಪನಾತಗಿದಿರಾರೈ ಧರಿತ್ರಿಯಲಿ ||೭೪||

ದ್ವಾರವೊಂಬತ್ತಿಂದ್ರಿಯದಹಂ
ಕಾರಕರಣಚತುಷ್ಟಯಂಗಳ
ಸಾರಭೂತಾಧಿಕದ ಸುಳಿವಿನ ಪಂಚವಾಯುಗಳ
ಹೋರಟೆಗಳಲಿ ಬಳಲಿ ಜೀವನ
ಧೀರನಹವೊಲು ಪಾಂಡುಪುತ್ರರ
ಕೌರವರ ಬೇಳಂಬದಲಿ ಬೆಂಡಾದೆ ನೀನೆಂದ ||೭೫||

ಮತ್ತನತಿಶ್ರಾಂತನು ಪ್ರಮದೋ
ನ್ಮತ್ತನತಿಕುಪಿತಾನನನು ಚಲ
ಚಿತ್ತನತಿಕಾಮುಕನು ಲುಬ್ಧನು ಶೂರನೆಂಬವನು
ಕ್ಷುತ್ತುಘನವಾಗುಳ್ಳನಿಂತೀ
ಹತ್ತು ಜನವಾವಾಗ ಧರ್ಮದ
ತತ್ತವಣೆಗಳನರಿಯರೈ ಭೂಪಾಲ ಕೇಳೆಂದ ||೭೬||

ದಾನವಿಷ್ಟಾಪೂರ್ತ ವಿನಯ ಸ
ಮಾನ ದೇವಾರ್ಚನೆ ಮಹೀಸುರ
ಧೇನು ಸಂತರ್ಪಣ ಮಹಾತಿಥಿ ಪೂಜೆ ಗುರುಭಕ್ತಿ
ಧ್ಯಾನ ದೀನಾನಾಥಬಂಧು ವಿ
ತಾನ ಶರಣಾಗತ ಸುರಕ್ಷಾ
ಸ್ನಾನ ತೀರ್ಥಂಗಳನು ಮಾಡಲು ಬೇಹುದವನಿಪರು ||೭೭||

ಧರೆಯೊಳೀ ಹೊತ್ತಿನಲಿ ನಿನಗೈ
ಶ್ವರಿಯದಲಿ ಮಕ್ಕಳಲಿ ಖಂಡೆಯ
ಸಿರಿಯಲೊಡಹುಟ್ಟಿದರು ಸಪ್ತಾಂಗದಲಿ ಸತಿಯರಲಿ
ಗುರು ಪಿತಾಮಹ ಬಂಧುಜನ ಮಿ
ತ್ರರಲದಾವುದು ಕೊರತೆ ಕೌಂತೇ
ಯರ ನೆರವಿಗರ ಮಾಡುವರೆ ಧೃತರಾಷ್ಟ್ರ ಕೇಳೆಂದ ||೭೮||

ಉಭಯಕುಲಶುದ್ಧಿಯಲಿ ಹೆಚ್ಚಿದ
ವಿಭವದಲಿ ವಿಗ್ರಹದಲಧಿಕ
ಪ್ರಭೆಗಳಲಿ ಸತ್ಯದಲಿ ಸಾಹಿತ್ತದಲಿ ವಿನಯದಲಿ
ಅಭವನಂಘ್ರಿಯ ಸೇವೆಯಲಿ ಹರಿ
ನಿಭನೆನಿಸಿ ಬದುಕುವನು ರಾಯ ಚಿತ್ತೈಸೆಂದನಾ ವಿದುರ ||೭೯||

ವೇಸಿಯಹ ಪರಿಯಂಕದಲಿ ನಿಜ
ದಾಸಿಯಹ ಶಿಶ್ರೂಷೆಯಲಿ ನಿ
ರ್ದೋಷಿಯಹ ಪತಿಭಕ್ತಿಯಲ ಮೋಹದಲಿ ತಾಯೆನಿಸಿ
ಏಸು ಕಾರ್ಯಕೆ ಮಂತ್ರಿಯೆನಿಸುವ
ಮೈಸಿರಿಯನುಳ್ಳವಳು ರಾಣೀ
ವಾಸವೆಂದೆನಿಸುವಳೆಲೈ ಭೂಪಾಲ ಕೇಳೆಂದ ||೮೦||

ತಂದೆ ತಾಯಿಗಳಾಜ್ಞೆಯನು ಸಾ
ನಂದದಲಿ ಪಾಲಿಸುತ ಮದವನು
ಮುಂದುಗೆಡಸಿ ಸುಧರ್ಮದಲಿ ರಾಜ್ಯವನು ಪಾಲಿಸುತ
ಬಂಧು ಬಳಗವ ಸಲಹಿ ಭೂಸುರ
ವೃಂದವನು ನೆರೆ ಹೊರೆವಡೆವ ಸುತ
ವಂದ್ಯನೈ ಲೋಕಕ್ಕೆ ಚಿತ್ತೈಸೆಂದನಾವಿದುರ ||೮೧||

ಇಹಪರದ ಸುಖಸಂಗತಿಯ ಸಂ
ಗ್ರಹಿಸಿ ವೇದಾಚಾರದಲಿ ಸ
ನ್ನಿಹಿತನಾಗಿ ಸಮಸ್ತ ಕಳೆಯಲಭಿಜ್ಞನೆಂದೆನಿಸಿ
ಅಹಿತ ಕುಲವನು ಸಮರದಲಿ ನಿ
ರ್ವಹಿಸಿ ಶರಣಾಗತರ ಪಾಲಿಸು
ತಿಹಡವನು ಮಗನೆನಿಸುವನು ಭೂಪಾಲ ಕೇಳೆಂದ ||೮೨||

ಇಂದ್ರಿಯವನೊಡೆತುಳಿದು ಕರ್ಮದ
ಬಂದಿಯನು ತಲೆಬಳಚಿ ವಿಷಯದ
ದಂದುಗವನೀಡಾಡಿ ಮಾಯಾಪಾಶವನು ಹರಿದು
ದ್ವಂದ್ವವಿರಹಿತನಾಗಿ ವಿಶ್ವದ
ಲೊಂದಿ ಮೆರೆಯಲು ಬಲ್ಲವನು ಗುರು
ವೆಂದೆನಿಸುವನು ರಾಯ ಚಿತ್ತೈಸೆಂದನಾ ವಿದುರ ||೮೩||

ಒಡಲೊಡವೆ ಮೊದಲಾದುವೆಲ್ಲವ
ತಡೆಯದೊಪ್ಪಿಸಿ ಗುರುವಿನಂಘ್ರಿಯ
ಹಿಡಿದು ಭಜಿಸುತ ಕೊಟ್ಟ ಕೆಲಸಂಗಳೊಳನಿತುವನು
ಬಿಡದೆ ಮಾರುತ್ತರವನವರಿಗೆ
ಕೊಡದೆ ಭಯ ಭಕ್ತಿಯಲಿ ತಪ್ಪದೆ
ನಡೆಯಬಲ್ಲವನವನೆ ಶಿಷ್ಯನು ರಾಯ ಕೇಳೆಂದ ||೮೪||

ಯುಕುತಿವಿದರುಗಳಾಗಿ ವಿದ್ಯಾ
ಧಿಕರೆನಿಸಿ ಸಮಬುದ್ಧಿಗಳ ನಾ
ಟಕವ ನಟಿಸುತ ಪರಮತತ್ವಜ್ಞಾನಪರರಾಗಿ
ಸಕಲ ಕಳೆಯಲಭಿಜ್ಞರಹ ಧಾ
ರ್ಮಿಕರು ಪರಪುರುಷಾರ್ಥಿಗಳು ವೈ
ದಿಕರಲೇ ವಿದ್ವಾಂಸರೆನಿಸುವರರಸ ಕೇಳೆಂದ ||೮೫||

ದಂಡನೀತಿ ಸ್ಮಾರ್ತ ಶೌಚೋ
ದ್ಧಂಡ ವೇದಾಧ್ಯನ ನಿಪುಣನ
ಪಂಡಿತಪ್ರಿಯ ಶಾಂತಿ ಪೌಷ್ಟಿಕ ಕರ್ಮ ದೀಧಿತನ
ಚಂಡ ದೈವಜ್ಞನನಧಿಕ ಗುಣ
ಮಂಡನನ ಬಹುಶಾಸ್ತ್ರಪಠಣನ
ಪಂಡಿತನ ಪೌರೋಹಿತನ ಮಾಡುವುದರಸ ಕೇಳೆಂದ ||೮೬||

ಸ್ಥೂಲ ಸೂಕ್ಷ್ಮ ಕೃತಜ್ಞನುತ್ಸವ
ಶೀಲನಕ್ರೋಧಿಯನ ದೀರ್ಘ ವಿ
ಶಾಲ ಸೂತ್ರಿಯ ವೃದ್ಧಸೇವಕ ಸತ್ಯ ವಾಕ್ಶುಚಿಯ
ಕಾಲವೇದಿ ವಿನೀತನವ್ಯಸ
ನಾಳಿ ಸೂರಿ ರಹಸ್ಯ ಸತ್ಕೃತಿ
ಪಾಲನಾನ್ವಿತ ಮಂತ್ರಿಯುಂಟೇ ರಾಯ ನಿನಗೆಂದ ||೮೭||

ತುರಗ ಗಜ ಭಟರಳವರಿವ ಸಂ
ಗರ ಮಹೋತ್ಸಾಹನ ಜಿತಶ್ರಮ
ನರಿಕಟಕಭೇದಕನ ನಾನಾಯುಧ ವಿಶಾರದನ
ಭರಿತ ಧೈರ್ಯನ ಪತಿಹಿತನ ಸಂ
ಗರಸದಾರನನೂರ್ಧ್ವರೋಮನ
ನಿರದೆ ಸೇನಾಪತಿಯ ಮಾಡುವುದರಸ ಕೇಳೆಂದ ||೮೮||

ತಿಳಿದವನ ಮತಿವಿದನ ಭಾಷಾ
ವಳಿ ಲಿಪಿಜ್ಞನ ಸಾಕ್ಷರನ ಮಂ
ಡಳಿಕ ಸಾವಂತರ ವಿಶೇಷದಲವಸರವನರಿದು
ಸಲೆ ಕರೆವ ಕಳುಹಿಸುವ ನಿಲಿಸುವ
ಬಲುಹನುಳ್ಳನ ಸುಕರ ದುಷ್ಕರ
ತಿಳಿವ ಹೃದಯನ ಸಂಧಿವಿಗ್ರಹರೆನಿಸಬೇಕೆಂದ ||೮೯||

ಮಿಸುಪ ಮಣಿಗಣ ಲೋಹ ಕಾಂಚನ
ವಿಸರ ಭೇದವನರಿವ ಕೊಟ್ಟುದ
ನಸಿಯಲೀಯದೆ ತಾನು ಭಕ್ಷಿಸದಹಿ ನಿಧಾನವನು
ಒಸೆದು ಕಾದಿಪ್ಪಂತೆ ಕಾದಿಹ
ಹುಸಿಯದಾಪ್ತನ ಬಹುಕುಟುಂಬ
ವ್ಯಸನವುಳ್ಳನ ಮಾಳ್ಪುದೈ ಭಂಡಾರ ರಕ್ಷಕನ ||೯೦||

ಮನ ವಚನ ಕಾಯದಲಿ ದಾತಾ
ರನ ಹಿತವನುಳ್ಳನ ವಿನೀತನ
ವಿನುತ ವನಿತಾ ನತಮುಖನ ನಿಷ್ಕಳಿತ ರೋಷಕನ
ಮುನಿವರ ಬುದ್ಧಿಯಲಿ ಸಿಲುಕದ
ವನ ವಿಶೇಷ ಕಳಾಪ್ರವೀಣನ
ಜನಪ ಚಿತ್ತೈಸುವುದೆಲೈ ತಾಂಬೂಲಧಾರಕನ ||೯೧||

ಪಿತೃ ಪಿತಾಮಹ ಸೂಪಶಾಸ್ತ್ರ
ಯುತನ ಕೈಕರಣೆಗಳಲಧಿಕನ
ನತಿ ಶುಚಿಯ ಸಾಧಕನನಕ್ರೋಧಿಯನನಾಲಸನ
ಪತಿಹಿತನ ಷಡುರಸ  ವಿಶೇಷಾ
ನ್ವಿತನನಿತರಾಲಯವಿದೂರನ
ಪತಿಕರಿಸುವುದು ಸೂಪಕಾರತೆಗರಸ ಕೇಳೆಂದ||೯೨||

ನಿಶಿತ ಪರಿಮಳ ಮೋದದಿಂ ಮೋ
ದಿಸುವ ಗಂಧದ್ರವ್ಯದಲಿ ಪಂ
ಠಿಸಿದ ಜೀವನ ಜೀವ ತನ್ನಯ ಜೀವನವೆಯೆಂದು
ವಸುಮತೀಶರಿಗಿತ್ತು ತಾ ಭೋ
ಗಿಸದೆ ಬಳಸದೆ ರಾಜನನೋಲ
ಗಿಸುವವನೆ  ಪಾನೀಯಧಾರಕನರಸ ಕೇಳೆಂದ ||೯೩||

ಉನ್ನತ ರೂಪಾಧಿಕನ ಸಂ
ಪೂರ್ಣದಕ್ಷನನನ್ಯರೆನ್ನವ
ರೆನ್ಷದನ ಪರರಿಂಗಿತಾಕಾರ ಪ್ರಭೇದಕನ
ಮನ್ನಣೆಗೆ ಬೆರೇಯದನನಾಪ್ತನ
ನನ್ಯ ಕಾರ್ಯೋಚಿತ ಸಮಪ್ರತಿ
ಪನ್ನ ಪಡಿಹಾರಕನ ಮಾಡುವುದರಸಕೇಳೆಂದ ||||೯೪||

ಗ್ರಾಮ ಮೂರರ ಸಂಚರಣೆಗಳ
ಸೀಮೆಯಲಿ ಸರಿಗಮಪದನಿಗಳ
ನೇಮ ತಪ್ಪದೆ ಹರಣಭರಣದ ಹೆಂಪು ತಿರುಪುಗಳ
ಕೋಮಲಿತ ಶಾರೀರ ಹೃದಯದ
ರಾಮಣೀಯಕ ರಚನೆಯಲ್ಲಿ ಸ
ನಾಮನೆನೆಸುವನವನೆ ಗಾಯಕನರಸ ಕೇಳೆಂದ ||೯೫||

ತಾಳ ಲಯ ಬೊಂಬಾಳ ಮಿಶ್ರದ
ಹೇಳಿಕೆಯನಾ ಠಾಯ ಶುದ್ಧದ
ಸಾಳಗದ ಸಂಕೀರ್ಣ ದೇಸಿಯ ವಿವಿಧ ರಚನೆಗಳ
ಮೇಳವರಿವುತ ವಾದ್ಯ ಸಾಧನ
ದೇಳಿಗೆಯ ಸಂಪೂರ್ಣ ಮಾರ್ಗದ
ಸೂಳುಗಳ ಲಯಮಾನವರಿದವನವನೆ ಗಾಯಕನು ||೯೬||

ಗಾಯದಲಿ ಮೇಣ್ ಚೊಕ್ಕೆಯದಲಡು
ಪಾಯಿಗಳಲುಪಕಾಯದೊಳಗೆ ನ
ವಾಯಿಗಳ ಬಿನ್ನಾಣದಲಿ ಬಳಿಸಂದು ಬೇಸರದೆ
ಸ್ಥಾಯಿಯಲಿ ಸಂಚಾರದಲಿ ಸಮ
ಗೈಯೆನಿಸಿ ನಾನಾ ವಿನೋದದ
ದಾಯವರಿವವನವನೆ ಮಲ್ಲನು ಕೇಳು ಧೃತರಾಷ್ಟ್ರ ||೯೭||

ಎಡ ಬಲನನಾರೈವುತೊಬ್ಬನ
ಬಿಡದೆ ನೋಡುತ ಮಕ್ಷಿಕಂಗಳ
ಗಡಣವನು ಕೆದರಿಸುತ ಕಿಗ್ಗಣ್ಣಿಕ್ಕಿ ಕೆಲಬಲನ
ಜಡಿದು ನೂಕುವ ಸ್ವಾಮಿಕಾರ್ಯದ
ಕಡೆಯೆನಿಸುತಾವಾಗ ಸೇವೆಗೆ
ಸೆಡೆಯದವನೇ ಚಮರಧಾರಕನರಸ ಕೇಳೆಂದ ||೯೮||

ಗುಳಿ ತೆವರನೀಕ್ಷಿಸುತ ಬಟ್ಟೆಯ
ಮೆಳೆ ಮರಂಗಳ ಹೊಯ್ಲ ತಪ್ಪಿಸಿ
ನೆಳಲನರಸುತ ವೇಗಗತಿ ಸಾಮಾನ್ಯಗತಿಗಳಲಿ
ಬಳಿವಿಡಿದು ಭೂಭುಜರ ಯಾನಂ
ಗಳೊಳಗಳುಕದೆ ಡಗೆಯ ಸೈರಿಸಿ
ಬಳಸುವವನೇ ಛತ್ರಧಾರಕನರಸ ಕೇಳೆಂದ ||೯೯||

ಹರುಷದಲಿ ನಿಜಜನನಿ ಗರ್ಭವ
ಧರಿಸಕೊಂಡಾಡುವವೊಲುತ್ತಮ
ಪುರುಷರಂತರ್ಯಾಮಿಯನು ತಾಳ್ವಂತೆ ಭೂಭುಜರ
ಧರಿಸಿ ಸುಖ ಸಂಗತಿಗಳಲಿ ಸಂ
ಚರಿಸುತಾಳ್ದನ ಹಾನಿ ವೃದ್ಧಿಯ
ಲಿರಲು ಬೆಸದವರೆನಿಸುವರು ಭೂಪಾಲ ಕೇಳೆಂದ ||೧೦೦||

ಹಿಂದೆ ಮಾಡಿದ ಸುಕೃತ ಫಲವೈ
ತಂದು ಸಾರುವವೋಲು ನಾನಾ
ಚಂದದಾಪತ್ತಿನಲಿ ಹರಿನಿಜಭಕ್ತ ಸಂತತಿಯ  
ಮುಂದೆ ನಿಲುವವೊಲವನಿಪಾಲರ
ದಂದುಗದ ಹೊತ್ತಿನಲಿ ಗಜ ಹಯ
ವೃಂದವನೆ ಚಾಚುವನು ವಾಹಕನರಸ ಕೇಳೆಂದ ||೧೦೧||

ಪರ್ಬತವನೊಡೆದುಳಿಸಿ ಭೂಮಿಯ
ನಿಬ್ಬಗೆಯ ಮಾಡಿಸುತ ರಥ ಗಜ
ದೊಬ್ಬುಳಿಯ ಹರೆಗಡಿಸಿ ಕಾದಿಸುತಾನೆಗಳ ಮೇಲೆ
ಬೊಬ್ಬಿರಿದು ಶರವಳೆಯ ಸುರಿಸುರಿ
ದುಬ್ಬರದ ಬವರದೊಳಗಹಿತರಿ
ಗುಬ್ಬಸವನೆಸಗುವನೆ ಜೋಧನು ರಾಯ ಕೇಳೆಂದ ||೧೦೨||

ಕುದುರೆಗಳನಾರೈದು ರಥವನು
ಹದುಳಿಸುತ ಸಾರಥಿಯನೊಲವು
ತ್ತಿದಿರ ಮುರಿವುತ ತನ್ನ ಕಾಯಿದುಕೊಳುತ ಕೆಲಬಲನ
ಸದೆದು ಮರಳುವ ಲಾಗುವೇಗದ
ಕದನಕಾಲಾನಲನವನು ತಾ
ಮೊದಲಿಗನಲೇ ರಥಿಕರಿಗೆ ಧೃತರಾಷ್ಟ್ರ ಕೇಳೆಂದ ||೧೦೩||

ಬಿಟ್ಟ ಸೂಟಿಯಲರಿ ನೃಪಾಲರ
ಮುಟ್ಟಿ ಮೂದಲಿಸುತ್ತ ಮೋಹಿದ
ಥಟ್ಟನೊಡಹಾಯ್ದಹಿತ ಬಲದೊಳಗಾನೆವರಿವರಿದು
ಹಿಟ್ಟು ಗುಟ್ಟುತ ಹೆಣನ ವಟ್ಟಾ
ವಟ್ಟಿ ಮಸಗಲು ಕಳನ ಚೌಕದ
ಲಟ್ಟಿಯಾಡಿಸಬಲ್ಲಡವ ರಾವುತನು ಕೇಳೆಂದ ||೧೦೪||

ಬೇಸರದೆ ಕಾಳೋರಗನನ
ಡ್ಡೈಸಿ ಕಟ್ಟಿರುವೆಗಳು ಖಂಡನ
ಸೂಸಿ ಕಡಿಕಡಿದೊಟ್ಟಿದಂದದಲಹಿತ ಬಲದೊಳಗೆ
ಓಸರಿಸದೊಳಹೊಕ್ಕು ಸಮರ ವಿ
ಳಾಸವನು ನೆರೆ ಮೆರೆದು ಕೇಶಾ
ಕೇಶಿಗೊದಗುವನವನೆ ಕಾಲಾಳರಸ ಕೇಳೆಂದ ||೧೦೫||

ಬರಲು ಕಂಡಡೆ ವಂದಸುತಲಂ
ತರಿಸಿ ಮಿಗೆ ಹತ್ತಿರವೆನಿಸದತಿ
ತರದ ದೂರವ ಸಾರದೀಪರಿ ಮಧ್ಯಗತನೆನಿಸಿ
ಪರಿವಿಡಿಯಲೋಲಗಿಸುತರಸನ
ಸಿರಿಮೊಗವನೀಕ್ಷಿಸುತ ಬೆಸಸಿದ
ನರವರಿಸದಾಕ್ಷಣಕೆ ಮಾಡುವವನೇ ಸೇವಕನು ||೧೦೬||

ಕುನಖಿ ಕುಷ್ಟ ಕುಶೀಲಕನು ಕು
ಬ್ಜನನು ವಿಧವಾಲಿಂಗಿ ದಾಸಿಯ
ತನು ವಿಕಾರಿಯನಂಗಹೀನನ ಪಂಗುಳಾಂಧಕನ
ಘನರುಜಾಂಗನ ಬಿಡುದಲೆಯ ರೋ
ಧಿನಿಯನುಪ್ಪವಡಿಸುವ ಸಮಯದೊ
ಳಿನಿಬರನು ಕಾಣ್ಬುದು ಮಹೀಶರಿಗಂಗವಲ್ಲೆಂದ ||೧೦೭||

ಕಲಶ ಕನ್ನಡಿ ಕರಿ ತುರಗ ಗೋ
ಕುಲ ವೃಷಭ ಬುಧನಿಚಯ ಗಿರಿ ಸಂ
ಕುಳ ಸುವಾಸಿನಿ ಮಾತೃ ಪಿತೃ ವರವಾಹಿನೀಚಯ
ಜಲಧಿವಸನಚ್ಛತ್ರ ಉರ್ವೀ
ಲಲನೆಯರನೀಕ್ಷಿಸುವುದವನಿಪ
ತಿಲಕರುಪ್ಪವಡಿಸುವ ಸಮಯದೊಳರಸ ಕೇಳೆಂದ ||೧೦೮||

ಶ್ವಾನ ಕುಕ್ಕುಟ ಕಾಕ ಬಕ ಪವ
ಮಾನ ಖಗಷಪತಿ ದಿವಿಜ ರಜನಿ ಕೃ
ಶಾನುವಿನ ಗಾರ್ದಭನ ವೃಷಭನ ಶಿಂಶುಮಾರಕನ
ವಾನರನ ಹಯ ಕುಂಜರನ ಪಂ
ಚಾನನನ ಮೃಗಪೋತಕನ ಗುಣ
ವಾ ನರೇಂದ್ರನೊಳಿರಲು ಬೇಹುದು ಭೂಪ ಕೇಳೆಂದ||೧೦೯||

ಪರಿಪರಿಯ ದಾನಂಗಳನು ಕರೆ
ಕರೆದು ಲೋಗರಿಗಿತ್ತು ಪರರನು
ಹೊರೆದು ತನ್ನಾಶ್ರಿತರನತಿಗಳೆದಾಪ್ತ ಬಾಂಧವರ
ಸರಕು ಮಾಡದೆ ಗರ್ವದಿಂದು
ಬ್ಬರಿಸುತಿಹ ಪಾತಕರ ಪದವಿಯ
ನರಸ ಬಣ್ಣಿಸಲಾರು ಬಲ್ಲರು ಯಮನ ನಗರಿಯಲಿ||೧೧೦||

ಮೂರು ಕೋಟಿಯ ಕೋಟಿಧರ್ಮವ
ಮೀರದಿಹ ರೋಮಾಳಿ ಸಂಖ್ಯೆಯೊ
ಳಾರೆನೆನ್ನದೆ ನಿಜಪತಿಯ ಸಹಗಮನದಲಿ ತನುವ
ಮಾರಿದಬಲೆಯರುಗಳ ದೆಸೆಯಿಂ
ದಾರುಮಡಿ ಸ್ವರ್ಗಾದಿ ಭೋಗವ
ಸೂರೆಗೊಂಬುದು ತಪ್ಪದವನೀಪಾಲ ಕೇಳೆಂದ ||೧೧೧||

ಆವನೊಬ್ಬನು ಸತ್ಯಕೋಸುಗ
ಭಾವಶುದ್ಧಿಯಲೊರಡಿಚುವ ಶಪ
ಥಾವಸಾನದಲವನಧರ್ಮದಲರ್ಧನನು ಯಮನು
ಓವನನ್ಯಾಯದಲಿ ಸೂರುಳ
ನೋವಿ ರಚಿಸಿದವಂಗೆ ಗತತಿಯಿ
ನ್ನಾವುದೆಂಬುದನಾರು ಬಲ್ಲರು ಭೂಪ ಕೇಳೆಂದ ||೧೧೨||

ಕೋಪವೆಂಬುದನರ್ಥ ಸಾಧನ
ಕೋಪವೇ ಸಂಸಾರ ಬಂಧನ
ಕೋಪದಿಂದಿಹಪರದ ಸುಕೃತವು ಲಯವನೈದುವುದು
ಕೋಪವನು ವರ್ಜಿಸಲು ಬೇಹುದು
ಕೋಪವುಳ್ಳವನಾವನಾಗಲಿ
ಕಾಪುರುಷನಿಹಪರಕೆ ಚಿತ್ತೈಸೆಂದನಾ ವಿದುರ ||೧೧೩ ||

ವೈದ್ಯನಲಿ ಮಾಂಸದಲಿ ದ್ವಿಜನಲಿ
ನಿದ್ರೆಯಲಿ ತನುವಿನಲಿ ವನದಲಿ
ವಿದ್ಯೆಯಲಿ ಪದವಿಯಲಿ ಸಂಖ್ಯಸಂಖ್ಯವೆಸರುಗಳಲಿ
ತದ್ವಿಷಯಕೆ ಮಹಾ ಸಬುದವನು
ಹೊದ್ದಿಸುವುದತಿಕಷ್ಟವವರಿಗೆ
ಸದ್ಯಫಲವದು ತಪ್ಪದವನೀಪಾಲ ಕೇಳೆಂದ ||೧೧೪|

ಗರುವ ಮಾನ್ಯನು ಮನಿತ ದೈವಾ
ಪರನು ಕಡುಸುಖಿ ಭೋಗಿ ರೂಪೋ
ತ್ಕರನು ಧನಿಕನು ರಾಜಪೂಜ್ಯನು ಕೀರ್ತಿವಲ್ಲಭನು
ಗುರುಜನಕೆ ಬಹು ವಿದ್ಯವುಳ್ಳವ
ನರಸ ಕೇಳೈ ವಿದ್ಯೆಯಿಲ್ಲದ
ನರನು ನರಪಶುವವನ ಜನ್ಮ ನಿರರ್ಥಕರವೆಂದ||೧೧೫||

ವಿದ್ಯೆ ಸತ್ಕುಲ ಬಹು ವಿವೇಕವು
ಬುದ್ಧಿ ಜಾಣ್ಮೆಯ ನುಡಿಯ ಸಡಗರ
ಶುದ್ಧಚಿತ್ತ ಸುಶೀಲ ಭುಜಬಲ ಭದ್ರನೆಂದೆನಿಸಿ
ಉದ್ಯುಗವು ಮೊದಲಾದ ಗುಣಗಳಿ
ವಿದ್ದು ಫಲಲಲವೇನೀ ಜಗದ ತೊರೆ
ಮದ್ದು ಹೊದ್ದದ ನರಗೆ ದಾರಿದ್ರಾಂಗನಾವರೆಗೆ ||೧೧೬||

ಧರೆಯೊಳಗೆ ಶುಚಿಯಹನು ವೈಶ್ವಾ
ನರನು ಕಾಂತಾದರ್ಶಿಯಹ ಕವಿ
ವರನು ಸುವ್ರತ ಕಾಮನೆನಿಸುವ ಬ್ರಾಹ್ಮಣೋತ್ತಮನು
ಹರಿಹರಾತ್ಮಕ ನಾಮಕೀರ್ತನ
ವೆರಸಿ ಬದುಕುವನೊಬ್ಬನೀ ನಾ
ಲ್ವರುಗಳಲ್ಲದೆ ಭುವನದೊಳಗನ್ಯತ್ರವಿಲ್ಲೆಂದ ||೧೧೭|

ಹರಿಭಕುತಿ ಲೋಲುಪನೆನಿಸಿ ಶಂ
ಕರನ ಬದ್ಧದ್ವೇಷಿಯಹ ಶಂ
ಕರನ ಭಕ್ತಿಯೊಳಧಿಕವಾಗಿಯು ವೈಷ್ಣವರ ಮೇಲೆ
ಎರಕವಿಲ್ಲದ ಕರ್ಮ ಚಾಂಡಾ
ಲರುಗಳೆಪ್ಪತ್ತೈದು ಕೋಟಿಯ
ನರಕದೊಳಗೋಲಾಡುತಿಹರೆಲೆ ರಾಯ ಕೇಳೆಂದ ||೧೧೮||

ಯತಿ ಕೆಡುಗು ದುಸ್ಸಂಗದಲಿ ಭೂ
ಪತಿ ಕೆಡುಗು ದುರ್ಮಂತ್ರಿಯಲಿ ವರ
ಸುತ ಕೆಡುಗು ಲಾಲನೆಗಳಲಿ ಕೃಷಿ ಕೆಡುಗುಪೇಕ್ಷೆಯಲಿ
ಮತತಿ ಕೆಡುಗು ಮಧು ಪಾನದಲಿ ಸ
ದ್ಗತಿ ಕೆಡುಗು ದುಶ್ಚರಿತದಲಿ ನಿಜ
ಸತಿ ಕೆಡುಗು ದುರ್ವ್ಯಸನದಲಿ ಭೂಪಾಲ ಕೇಳೆಂದ ||೧೧೯||

ಉಂಡು ತೀರಿಸಬೇಕು ತಾ ಮುಂ
ಕೊಂಡು ಮಾಡಿದ ಪುಣ್ಯ ಪಾಪದ
ತಂಡವನು ತೆರಹರಣವಿಲ್ಲದೆ ಭವ ಭವಂಗಳಲಿ
ಹಿಂಡಿ ಹಿಳಿವುದು ಬೆಂಬಿಡದೆ ಸಮ
ದಂಡಿಯಲಿ ಹಗೆ ಕೆಳೆಗಳೆನ್ನದೆ
ಗಂಡುಗೆಡಿಸದೆ ಬಿಡುವುದೇ ವಿಧಿಯೆಂದನಾ ವಿದುರ ||೧೨೦||

ಸ್ನೇಹಪೂರ್ವಕದಿಂದ ಮನದೊಳ
ಗಾಹಿಸಲು ಲಕ್ಷ್ಮೀಷನವರಿಗೆ
ಬೇಹ ಪುರುಷಾರ್ಥಂಗಳಹವೆಲ್ಲಿದ್ದರಲ್ಲಲ್ಲಿ
ಈ ಹದನು ತಪ್ಪುವುದೆ ಕೂರ್ಮನ
ಮೋಹದಲಿ ತತ್ಸಂತತಿಗೆ ನಿ
ರ್ವಾಹವಹವೋಲರಸ ಚಿತ್ತೈಸೆಂದನಾ ವಿದುರ ||೧೨೧||

ಕೂಡಿದೆಡೆಯಲಕೃತ್ಯ ಶತವನು
ಜೋಡಿಸಿದವರು ಮಿತ್ರರುಗಳಿಗೆ
ಕೇಡ ಚಿಂತಿಸಿದವರುಗಳು ಪುರುಷಾರ್ಥವನು ತಮಗೆ
ಮಾಡಿದವರುಗಳಿಗೆ ವಿಘಾತಿಯ
ಹೂಡಿದವದಿರು ನರಕದೊಳಗೋ
ಲಾಡದಿಹರೇ ರಾಯ ಚಿತ್ಹೈಸೆಂದನಾ ವಿದುರ ||೧೨೨||

ಕುಲಜನಾಗಲಕುಲಜನಾಗಲಿ
ಜಲರುಹಾಕ್ಷನ ನಾಮ ಕೀರ್ತನ
ದೊಳಗೆ ಬದುಕುವನಾವನಾತನೆ ಸುಕೃತಿಯೆಂಬವನು
ಉಳಿದ ಜಪ ತಪ ನಿಯಮ ಹೋಮಂ
ಗಳಲಿ ಸಂಸಾರಾರ್ಣವವನು
ಚ್ಚಳಿಸಬಹುದೇ ರಾಯ ಚಿತ್ತೈಸೆಂದನಾ ವಿದುರ ||೧೨೩||

ಜಾತರೂಪದಲೇಸು ಹೊಲ್ಲೆಹ
ವೀತಿಹೋತ್ರನ ದೇಹಕಾರಣ
ಭೂತವಾಗಿಹುದವಗೆ ಸದಸತ್ತುಗಳ ಭೇದವನು
ನೀತಿ ಮುಖದಿಂದರಿವುದುತ್ತಮ
ನೀತ ಮಧ್ಯಮನೀತ ಕನಿಯಸ
ನೀತವೆಂಬುದನರಸ ಚಿತ್ತೈಸೆಂದನಾ ವಿದುರ ||೧೨೪||

ಅವನಿಯಲಿ ಜನಜನಿತ ಧನ ಧಾ
ನ್ಯವನು ಕಳಹಲಗೈದು ಸಂತೋ
ಷವನು ಮಾಡುವ ಕಡೆಯಲೊಂದಕೆ ನೂರು ಮಡಿಯಾಗಿ
ಲವಲವಿಕೆ ಮಿಗಲಿತ್ತು ಸಪ್ತಾಂ
ಗವನು ಸಲಹುತ್ತಿರಲುಬೇಹುದು
ರವಿಯವೊಲು ಸಾವಿರ ಮುಖದೊಳವನೀಶ ಕೇಳೆಂದ ||೧೨೫||

ಇನನುದಯಿಸಲಿ ಪಶ್ಚಿಮಾದ್ರಿಯೊ
ಳನಲನೊಮ್ಮೆ ಹಿಮಾಂಶುವಾಗಲಿ
ಕನಕಗಿರಿಗಲ್ಲಾಟವಾಗಲಿ ಪರ್ವತಾಗ್ರದಲಿ
ವನಜ ವಿಕಸಿತವಾದೊಡೆಯು ಸ
ಜ್ಜನರುಗಳು ನುಡಿದೆರಡನಾಡರು
ಮನ ವಚನ ಕಾಯದಲಿ ಚಿತ್ತೈಸೆಂದನಾ ವಿದುರ ||೧೨೬||

ಹರನ ಕೊರಳಿಂಗಾಭರಣವಾ
ದುರಗ ಪವನಾಶನವೆನಿಸುವಂ
ತರಸ ನಿನ್ನಯ ಬಸುರ ಬಂದೇನಹರು ಪಾಂಡವರು
ನರಪಶುಗಳಾದರು ಕಣಾ ನೀ
ನಿರಲು ವನವಾಸದಲಿ ಸೊಪ್ಪನ
ವರತ ಮೆಲುವುದೆ ರಾಯ ಚಿತ್ತೈಸೆಂದನಾ ವಿದುರ ||೧೨೭||

ದೇವತಾಸ್ಥಾನದಲಿ ವಿಪ್ರ ಸ
ಭಾವಳಯದಲಿ ರಾಜಪುರುಷರ
ಸೇವೆಯಲಿ ರವಿ ಶಶಿಗಳುದಯಾಸ್ತಮಯ ಕಾಲದಲಿ
ಗೋವುಗಳ ನೆರವಿಯಲಿ ವರ ವೃಂ
ದಾವನದೊಳುಪಹತಿಯ ಮಾಡುವು
ದಾವ ಗುಣ ಗರುವರಿಗೆ ಚಿತ್ತೈಸೆಂದನಾ ವಿದುರ ||೧೨೮|||

ನಾಯ ನಡುಬೋನವನು ನೆಚ್ಚಿ ವೃ
ಥಾಯ ಕೆಡಬೇಡಾ ಯುಧಿಷ್ಠಿರ
ರಾಯನನು ಕರೆಸುವುದು ಭೀಷ್ಮಾದಿಗಳ ಮುಂದಿಟ್ಟು
ನ್ಯಾಯಮುಖದಲಿ ಸಕಲ ರಾಜ್ಯ
ಶ್ರೀಯನರ್ಧವನಿತ್ತು ಬದುಕುವು
ದಾಯತಿಕೆಯೊಳಗಹುದು ಚಿತ್ತೈಸೆಂದನಾ ವಿದುರ ||೧೨೯||

ಚಕ್ರವರ್ತಿಗಳಾರಲೇ ಭೂ
ಚಕ್ರದೋಳಗವರಿಗೆ ಮುರಾರಿಯ
ಚಕ್ರವೇ ಬೆಸಗೆಯ್ವುದಲ್ಲದೆ ಪಾಂಡು ತನಯರಿಗೆ
ಚಕ್ರಿ ತಾ ಬಂದವರ ಸೇವಾ
ಚಕ್ರದೊಳಗಿಹನಾ ಯುಧಿಷ್ಠಿರ
ಚಕ್ರವರ್ತಿಗದಾವನೈ ಸರಿಯೆಂದನಾ ವಿದುರ ||೧೩೦||

ನಳನೃಪತಿ ದಮಯಂತಿ ಸೀತಾ
ಲಲನೆ ರಾಘವದೇವ ದ್ರೌಪದಿ
ಕಲಿಯುಧಿಷ್ಠಿರದೇವನಿವರಿಂತಾರು ಮಾನಿಸರು
ಇಳೆಯೊಳುತ್ತಮ ಕೀರ್ತಿಘಳು ಜಾ
ವಳದ ಪುರುಷರೆ ಧರ್ಮಪುತ್ರನ
ಗೆಲುವ ಪರಿಯೆಂತೈ ಮಹಾದೇವೆಂದನಾ ವಿದುರ ||೧೩೧||

ಜನಪ ಕೇಳೈ ಸ್ಕಂದನನು ರಾ
ಮನನು ಹನುಮನ ಭೀಮಸೇನನ
ವಿನತೆಯಾತ್ಮಜನಿಂತಿದೈವರ ಭಾವಶುದ್ಧಿಯಲಿ
ನೆನೆದವರ ದುರಿತಂಗಳೋಡುವ
ವೆನಲು ನೀವೀ ಪವನಪುತ್ರನ
ನನುವರದೊಳೆಂತಕಟ ಜಯಿಸುವಿರೆಂದನಾ ವಿದುರ ||೧೩೨||

ಹರಿಹಯನು ಗುಹ ರಾಮ ಬಾಣಾ
ಸುರನು ದಶಶಿರ ಭೀಮಸೇನಾ
ದ್ಯರು ಕಣಾ ಗಿರಿಜಾಧಿನಾಥನ ಡಿಂಗರಿಗರಿವರು
ಸರಸವೇ ಮೃತ್ಯುಂಜಯನ ಕೂ
ಡರಸ ನಿನ್ನಳವರಿಯದೇ ಹರಿ
ಸುರರೊಡನೆ ಹಗೆಗೊಂಬನೇ ಧೃತರಾಷ್ಟ್ರ ಕೇಳೆಂದ ||೧೩೩||

ಬಲ ವಿಭೀಷಣ ಭೀಷ್ಮ ನಾರದ
ಫಲುಗುಣನು ಪ್ರಹ್ಲಾದದೇನನು
ಜಲರುಹಾಕ್ಷನ ನಚ್ಚು ಮೆಚ್ಚಿನ ಭಕುತರಿವರುಗಳು
ಸುಲಭವೇ ನಿನಗವರ ಕೂಡಣ
ಕಲಹ ಬೀಭತ್ಸುವಿನ ಕೈ ಮನ
ದಳವನರಿಯಾ ಕಂಡು ಕಾಣುತ ಮರುಳಹರೆಯೆಂದ ||೧೩೪||

ಎಲ್ಲಿ ಯೋಗಾಧಿಪತಿ ಮುರಹರ
ನೆಲ್ಲಿಯರ್ಜುನದೇವನಿಹನ
ಲಲ್ಲಿ ಜಯಸಿರಿಯಲ್ಲದೇ ಬೇರಿಲ್ಲ ಕೇಳಿದನು
ಬಲ್ಲವರು ಬಲ್ಲರು ಕಣಾ ನೀ
ನಿಲ್ಲಿ ಪಾಂಡು ಕುಮಾರರಿ ಸರಿ
ಯಲ್ಲ ಬಲ್ಲೈ ಹಿಂದೆ ಬಂದ ವಿಪತ್ಪರಂಪರೆಯ ||೧೩೫||

ಹಿಂದೆ ಗೋಗ್ರಹಣದಲಿ ದ್ರುಪದನ
ನಂದನೆಯ ವೈವಾಹದಲೀ ಬಳಿ
ಸಂದ ಗಂಧರ್ವಖನ ದೆಸೆಯಲಿ ಘೋಷಯಾತ್ರೆಯಲಿ
ಬಂದ ಭಂಗವ ಕಂಡು ಕಂಡೇ
ನೆಂದು ಪಾಂಡುಖುಮಾರರೊಡನನು
ಸಂಧಿಸುವೇ ಕಲಹವನು ಚಿತ್ತೈಸೆಂದನಾ ವಿದುರ ||೧೩೬||

ಸಕಲ ನೀತಿಯ ರಹಸ್ಯವನು ಸು
ವ್ಯಕುತವೆನಲರುಹಿದೆನು ತತ್ವಕೆ
ಯುಕುತಿಯಾದರೆ ನೆನೆವುದಿನ್ನು ಸನತ್ಸುಜಾತನನು
ಮುಕುತಿಗಮಳಬ್ರಹ್ಮವಿದ್ಯಾ
ಪ್ರಕಟವನು ಶೆರೆ ಮಾಡಿ ಚಿತ್ತದ
ವಿಕಳತೆಯನೊಡೆಮೆಟ್ಟಿ ಸಲಹುವನೆಂದು ಬೋಧಿಸಿದ ||೧೩೭||

ಸನತ್ಸುಜಾತ ನೀತಿ

ಅವಧರಿಸು ಪರತತ್ವ ವಿದ್ಯಾ
ವಿವರ ಭೇದವನನ್ಯಜಾತಿಗ
ಳೆವಗೆ ಸಲುವುದೆ ಮುನಿವರನ ಕರುಣೋದಯದಲಹುದು
ಅವರಿವರುಗಳ ಮುಖದಲಿದು ಸಂ
ಭವಿಸುವುದೆ ಬ್ರಹ್ಮೋಪದೇಶದ
ಹವಣ ಬಲ್ಲವನಾವನೈ ಧೃತರಾಷ್ಟ್ರ ಕೇಳೆಂದ ||೨||
ಒಬ್ಬನೇ ಬಲ್ಲವನು ಲೋಕದೊ
ಳಿಬ್ಬರಿಲ್ಲ ಸನತ್ಸುಜಾತನು
ಸರ್ವಗುಣಸಂಪೂರನಾತನ ಭಜಿಸಿದೊಡೆ ನೀನು
ಸಭ್ಯನಹೆಯೆನಲಾ ಮುನಿಯ ಕ
ರ್ತವ್ಯಭಾವನೆಯೊಳರಸನಿರಲಾ
ವಿರ್ಭವಿಸಿದನು ವಿಪ್ರಕುಲಕಮಲಾರ್ಕನಾ ಕ್ಷಣಕೆ ||೩||

ನೆನೆಯಲೊಡನೆ ಸನತ್ಸುಜಾತನು
ಮನೆಗೆಬರಲಿದಿರೆದ್ದು ಕೌರವ
ಜನಕ ಮೈಯಿಕ್ಕಿದನೆನಗೆ ಬ್ರಹ್ಮೋಪದೇಶವನು
ಮುನಿಪ ನೀ ಕೃಪೆಮಾಡಬೇಕೆನ
ಲನುನಯದೊಳವನೀಪತಿಗೆ ಜನ
ಜನಜನಿತವೆನಲರುಹಿದನು ಪರಲೋಕಸಾಧನವ ||೪||

ಚಿತ್ತವಿಸು ಧೃತರಾಷ್ಟ್ರ ನೃಪ ಪರ
ತತ್ವವಿದ್ಯಾವಿಷಯ ಭೇದವ
ಬಿತ್ತರಿಸುವೆನು ಸಕಲ ಸಚರಾಚರದೊಳಗೆ ನೀನು
ಉತ್ತಮಾಧಮವೆನ್ನದೇ ಕಾ
ಣುತ್ತ ಹರುಷ ವಿಷಾದದಲಿ ಮುಳು
ಗುತ್ತಿರದೆ ಸಮರಸದೊಳಿಹುದುಪದೇಶ ನಿನಗೆಂದ ||೫||

ಅವನಿಪತಿ ಕೇಳಾತ್ಮನಿಂ ಸಂ
ಭವಿಸಿತಂಬರವಂಬರದಲಾ
ಪವನ ಪವನನಲಗ್ನಿ ಅಗ್ನಿಯಲಾದುದಾ ಭುವನ
ಭುವನದಿಂ ಧರೆ ಧರಣಿಯಿಂದು
ದ್ಭವಿಸಿತೋಷಧಿ ಓಷಧಿಗಳಿಂ
ದವತರಿಸಿತಾ ನಾದಿಪುರುಷ ಪ್ರಕೃತಿ ವಿಕೃತಿಗಳು ||೬||

ನೇತ್ರ ನಾಸಿಕ ಪಾದ ಪಾಣಿ
ಶೋತ್ರವೆಂಬಿವು ತಮ್ಮೊಳೊಂದೇ
ಸೂತ್ರದಲಿ ಸಂಸೃಷ್ಟವಾಗಿ ಸಮಾನಬುದ್ಧಿಯಲಿ
ಗಾತ್ರವಿಡಿದಿಹವೋಲು ವಿಶ್ವದ
ಮೈತ್ರಿಯಲಿ ಮನಸಂದು ಪಾತ್ರಾ
ಪಾತ್ರವೆನ್ನದೆ ಬೆರಸಿ ಬದುಕುವುದಧಿಕಗುಣವೆಂದ ||೭||

ಸೃಷ್ಟಿ ಸಂಹಾರದಲಿ ಭೂತದ
ಕಟ್ಟಳೆಗಳ ಗತಾಗತಿಗಳಲಿ
ಮುಟ್ಟಿಸಿದ ವಿದ್ಯೆಯಲವಿದ್ಯೆಯಲಪ್ರತಿಮನೆನಿಸಿ
ನಷ್ಟಿಯಲಿ ತುಷ್ಟಿಯಲಿ ಮನವನು
ಬಿಟ್ಟು ಹಿಡಿಯದೆ ಕಾಲಕರ್ಮವ
ಮೆಟ್ಟಿ ನಿಲೆ ಭಗವಂತನೆನಿಸುವೆ ರಾಯ ಕೇಳೆಂದ ||೮||

ಅಣುವಿನಲಿ ಲಘುವಿನಲಿ ಗುರುವಿನ
ಯೆಣಿಕೆಯಲಿ ಮಹಿಮೆಯಲಿ ಪ್ರಾಪ್ತಿಯ
ಭಣಿತೆಯಲಿ ಶೀಲತ್ವದಲಿ ವೆಂ
ಟಣಿಸಿ ರೇಚಕ ಪೂರಕದ ರಿಂ
ಗಣವನರಿವುದು ಯೋಗಸಿದ್ಧಿಗೆ ಲಕ್ಷಣವನೆಂದ ||೯||

ತ್ಯಜಿಸುವುದು ದುಸ್ಸಂಗವನು ನೀ
ಸೃಜಿಸುವುದು ಸತ್ಸಂಗವನು ಗಜ
ಬಜಿಸದಿರಹೋರಾತ್ರಿಯಲಿ ಧರ್ಮವನೆ ಸಂಗ್ರಹಿಸು
ಭಜಿಸು ನಿತ್ಯಾನಿತ್ಯವಸ್ತುವ
ವಿಜಯನಹೆ ಇಹಪರಕೆ ತತ್ವದ
ನಿಜವಿದೆಲೆ ಧೃತರಾಷ್ಠ್ರ ಚಿತ್ತೈಸೆಂದನಾ ಮುನಿಪ ||||೧೦||

ಕಾಯವಿದು ನೆಲೆಯಲ್ಲ ಸಿರಿ ತಾ
ಮಾಯಾರೂಪಿನ ಮೃತ್ಯುದೇವತೆ
ಬಾಯ ಬಿಡುತಿಹಳಾವುದೀತನ ಕಾಲಗತಿಯೆಂದು
ದಾಯವರಿದು ಮಹಾತ್ಮರಿದಕೆ ಸ
ಹಾಯ ಧರ್ಮವ ರಚಿಸುವುದು ನಿ
ರ್ದಾಯದಲಿ ಕೈಸೂರೆಗೊಂಬುದು ಮುಕುತಿ ರಾಜ್ಯವನು ||೧೧||

ಕೆಟ್ಟ ಮಾರ್ಗದಲಿಂದ್ರಿಯಂಗಳ
ಚಿಟ್ಟುಮುರಿಯಾಟದಲಿ ಮನ ಸಂ
ದಷ್ಟವಾಗಿಯನಿತ್ಯಸಂಸಾರದ ಸುಖಕ್ಕೆಳಸಿ
ಹುಟ್ಟು ಸಾವಿನ ವಿಲಗದಲಿ ಕಂ
ಗೆಟ್ಟು ನಾನಾ ಯೋನಿಯಲಿ ತಟ
ಗುಟ್ಟಿ ಬಳಲುವುದುಚಿತವೇ ಭೂಪಾಲ ಕೇಳೆಂದ ||೧೨||

ಹಲವು ವರ್ಣದೊಳೆಸೆವ ಗೋ ಸಂ
ಕುಲದೊಳೊಂದೇ ವರ್ಣದಲಿ ಕಂ
ಗೊಳಿಸುವೀ ಕ್ಷೀರಾಮೃತವು ಮೈಗೊಂಡು ತೋರ್ಪಂತೆ
ಹೊಲಬುಗೆಟ್ಟ ಚರಾಚರಂಗಳ
ಸುಳಿವಿನಲಿ ಸುಳಿದಡಗಿ ಕಡೆಯಲಿ
ನಿಲುವ ನಿಜವೊಂದಲ್ಲದೆರಡಿಲ್ಲೆಂದನಾ ಮುನಿಪ ||೧೩||

ಅತಿಶಯದ ಸುಕೃತವನು ವಿರಚಿಸಿ
ಗತಿವಡೆದು ಸ್ವರ್ಗಾದಿ ಭೋಗೋ
ನ್ನತಿಕೆಯನು ಭೋಗಿಸಿದ ಸಮನಂತರದೊಳವನಿಯಲಿ
ಪತನ ತಪ್ಪದು ಮರಳಿ ಬಾರದ
ಗತಿಯನರಿದು ಮಹಾನುಭಾವರ
ಮತವಿಡಿದು ನಡೆವುದು ನಯವು ಕೇಳೆಂದನಾ ಮುನಿಪ ||೧೪||

ಸಕಲ ಧರ್ಮದ ಸಾರವನು ಮತಿ
ವಿಕಳನಾಗದೆ ಚಿತ್ತವಿಸು ಬಾ
ಧಕವದಾವುದು ನಿನಗದನು ನೀನನ್ಯರುಗಳಲ್ಲಿ
ಯುಕುತಿಯಿಂದದಮಾಡದಿರು ನಿ
ರ್ಮುಕುತನಹೆ ಸಂಸಾರದಲಿ ಸಾ
ಧಕವಿದೊಂದೇ ಸಕಲ ಜನಮತವೆಂದನಾ ಮುನಿಪ ||೧೫||

ಒಂದು ವಸ್ತುವನೆರಡು ಮಾಡುವೆ
ನೆಂದು ಬುದ್ಧಿ ಭ್ರಾಂತಿಯಲಿ ಮನ
ಸಂದು ಸಮ್ಯಗ್ಜ್ಞಾನದುದಯದ ನೆಲೆಯ ಕಾಣಿಸದೆ
ದಂದುಗಂಬಡುತಿಹುದು ತತ್ವದ
ಹಿಂದುಮುಂದರಿಯದೆ ಮಹಾತ್ಮರು
ಬಂದ ಪಥದಲಿ ಬಾರದೇ ಕೆಡುತಿಹುದು ಜಗವೆಂದ ||೧೬||

ಪ್ರಣವದೊಂದಾ ವರ್ಣಮೂರರ
ಗುಣವಿಡಿದು  ತೋರುವ ಚರಾಚರ
ವೆಣಿಸಬಾರದು ವಿಶ್ವದಲಿ ನಿಸ್ಯೂತವಾಗಿಹುದು
ಹಣಿದು ಬೀಳಲು ಹೊಳೆವ ಜ್ಯೋತಿ
ರ್ಗಣದವೊಲು ತೊಳತೊಳಗಿ ಬೆಳಗುವ
ಗುಣರಹಿತನ ನಿಜಸ್ವರೂಪವಿದೆಂದನಾ ಮುನಿಪ ||೧೭||

ನಳಿನಮಿತ್ರನು ಪಶ್ಚಿಮಾಂಬುಧಿ
ಗಿಳಿಯೆ ನಾನಾ ಪಕ್ಷಿಜಾತಿಗಿ
ಳುಲಿವುವೈತಂದೊಂದು ವೃಕ್ಷವನೇರಿ ರಾತ್ರಯನು
ಕಕ್ಷೆದು ನಾನಾ ದೆಸೆಗೆ ಹರಿವವೊ
ಲಿಳೆಯ ಭೋಗದ ದೃಷ್ಟಿ ತೀರೀದ
ಬಳಿಕ ಲೋಕಾಂತರವನೆಯ್ದುವರೆಂದನಾ ಮುನಿಪ ||೧೮||

ಪೊಡವಿಯೊಳಗುದಯಿಸಿದ ದುಷ್ಕೃತ
ಬಿಡದು ಭೂಪರನದು ಪುಲೋಹಿತ
ರೇಡೆಗೆ ಬಳಿಕಾ ಮೂರ್ಖ ಶಿಷ್ಯನ ದೋಷ ಗುರುವಿನದು
ಮಡದಿ ಮಾಡಿದ ಪಾತಖವು ಪತಿ
ಗೊಡಲಹುದು ಪರಮಾರ್ಥವಿದು ಪರಿ
ವಿಡಿಯನರಿಯದೆ ಕೆಡುವುದೀ ಜಗವೆಂದನಾ ಮುನಿಪ ||೧೯||

ದುರ್ಜನರಿಗಂಜುವುದು ಲೋಕವು
ಸಜ್ಜನರ ಲೆಕ್ಕಿಸದು ತಾರ್ಕ್ಷ್ಯನ
ಸೆಜ್ಜೆಯೊಳಗಿಹ ದಂದಶೂಕನನರ್ಚಿಸುವರೊಲಿದು
ಉಜ್ಜ್ವಲಿತ ಭಕ್ತಿಯಲಿ ಬಹಳ ವಿ
ತರ್ಜೆಯಲಿ ಮೂಢಾತ್ಮರಿಕ್ಕಿದ
ಹಜ್ಝೆಯಿದು ಲೋಕಕ್ಕೆ ಕೇಳ್ ನೀನೆಂದನಾ ಮುನಿಪ ||೨೦||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ